ಮಾಗಡಿ: ಕವಿಯೊಬ್ಬ ತಾನು ಸೃಷ್ಟಿಸಿಕೊಳ್ಳುವ ಕಾವ್ಯ ಜಗತ್ತಿನ ಬಂಧಿಯಾಗದೆ, ಸ್ವಚ್ಛಂದವಾಗಿ ಎಲ್ಲೆಡೆಗೂ ಸಲ್ಲುವಂತಾಗ ಬೇಕು ಎಂದು ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಹಾಗೂ ಕವಿ ಪ್ರೊ. ಬಿ.ಜಯಪ್ರಕಾಶ ಗೌಡ ಕರೆ ನೀಡಿದರು.
ಅವರು ಹೊಂಬಾಳಮ್ಮನಪೇಟೆಯ ಹಿರಿಯ ನಾಟಕಕಾರ ಡಿ.ಆರ್. ಚಂದ್ರ ಮಾಗಡಿ ಮನೆಯಂಗಳದಲ್ಲಿ ನಡೆದ ಸಾಹಿತ್ಯ ಸಂವಾದದಲ್ಲಿ ಮಾತನಾಡಿದರು.
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಜಗತ್ತಿನ ಯಾವುದೇ ದೇಶದ ಸಾಹಿತ್ಯದೊಡನೆ ಬೇಕಾದರೂ ಪೈಪೋಟಿ ನಡೆಸಿದರೂ ಸಹ ಕನ್ನಡ ಭಾಷೆ ತನ್ನ ಅನನ್ಯತೆಯನ್ನು ಉಳಿಸಿಕೊಳ್ಳುವ ಸತ್ವವನ್ನು ಹೊಂದಿದೆ ಎಂದು ಅವರು ಹೇಳಿದರು.
ಕನ್ನಡ ಆಡಳಿತ ಭಾಷೆಯಾಗಬೇಕು ಎಂಬ ಕನ್ನಡಿಗರ ಬಹುದಿನ ಬಯಕೆ ಈಡೇರಬೇಕಾದರೆ ಕನ್ನಡದ ಮನಸ್ಸುಗಳು ಒಗ್ಗೂಡಿಸುವ ಮತ್ತೊಂದು ಗೋಕಾಕ್ ಚಳುವಳಿಯ ಅಗತ್ಯವಿದೆ ಎಂದು ಪ್ರೊ.ಬಿ.ಜಯಪ್ರಕಾಶ ಗೌಡ ತಿಳಿಸಿದರು. ಕೆಂಪೇಗೌಡರ ಕಾಲದ ಸಾಹಿತ್ಯ ಕೃತಿಗಳನ್ನು ಮರುಮುದ್ರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮಂಡ್ಯದ ಕರ್ನಾಟಕ ಸಂಘವು ಕರ್ನಾಟಕದ ಹೆಮ್ಮೆಯ ಸಂಸ್ಥೆಯಾಗಿದೆ. ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಗಳ ಸಂವರ್ಧನೆಗೋಸುಗ ಅನುಪಮ ಸೇವೆ ಸಲ್ಲಿಸುತ್ತಿರುವ ಪ್ರೊ.ಬಿ.ಜಯಪ್ರಕಾಶ ಗೌಡರ ಸಾಧನೆ ಮೆಚ್ಚುವಂತಿದೆ.
ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರಿತು ಜನತೆಗೆ ಪರಿಚಯಿಸುವ ಕನ್ನಡ ಭಾಷೆಯ ಕೃಷಿ ಹೆಚ್ಚಿಸ ಬೇಕಿದೆ ಎಂದು ಕನಕಪುರದ ರೂರಲ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಮುನಿರಾಜಪ್ಪ ತಿಳಿಸಿದರು.
ಕನ್ನಡದ ನಿಷ್ಕಲ್ಮಷ ಮನಸ್ಸು ಜಿ.ಪಿ.ರಾಜರತ್ನಂ. ಕಾವ್ಯ ನಾಟಕ, ವಿಮರ್ಶೆ ಹಲವು ಕ್ಷೇತ್ರಗಳಲ್ಲಿ ಅಮೂಲ್ಯ ಕೃತಿ ರಚಿಸಿ ಕನ್ನಡ ಭಾಷೆಯ ಸಿರಿವಂತಿಕೆ ಹೆಚ್ಚಿಸಿದ್ದ ರಾಜರತ್ನಂ ಕೃತಿಗಳನ್ನು ಯುವ ಜನತೆ ಓದ ಬೇಕಿದೆ ಎಂದು ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನ ಪ್ರೊ. ಎಂ.ಜಿ. ಚಂದ್ರಶೇಖರ್ ತಿಳಿಸಿದರು.
ವಿವೇಕಾನಂದ ಕಾಲೇಜಿನ ಪ್ರೊ.ಲಿಂಗರಾಜು ರನ್ನನ ಪದಗಳನ್ನು ಕುರಿತು ಮಾತನಾಡಿದರು.
ಹಿರಿಯ ನಾಟಕಕಾರ ಡಿ.ಆರ್.ಚಂದ್ರಮಾಗಡಿ ಅಧ್ಯಕ್ಷತೆವಹಿಸಿದ್ದರು. ಸಹೃದಯ ಬಳಗದ ಖಜಾಂಚಿ ಮಂದಾರ ಶಿವಲಿಂಗಯ್ಯ, ಶಿಕ್ಷಕ ಮಾರಣ್ಣ, ಉಪನ್ಯಾಸಕ ಗೋವಿಂದರಾಜು, ಲೇಖಕ ಗಂಗನರಸಿಂಹಯ್ಯ ಹಾಗೂ ಚೆಲುವರಾಯ ಸ್ವಾಮಿ ಸಾಂಸ್ಕೃತಿಕ ಬಳಗದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.