ಕನಕಪುರ: ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಕೇವಲ ಒಂದು ವರ್ಗ ಅಥವಾ ಜನಾಂಗಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಆತ ಎಲ್ಲಾ ಜನಾಂಗ ಮತ್ತು ಧರ್ಮದ ಜನ ವಾಸಮಾಡಲು ಶ್ರೇಷ್ಠ ಬೆಂಗಳೂರು ನಗರವನ್ನು ನಿರ್ಮಿಸಿದ ಪುರುಷ ಎಂದು ಶಾಸಕ ಡಿ.ಕೆ.ಶಿವಕುಮಾರ್ ಬಣ್ಣಿಸಿದರು.
ಮಂಗಳವಾರ ಪಟ್ಟಣದ ರಾಜ್ಯ ರಸ್ತೆ ಸಾರಿಗೆ ನಿಗಮ ಘಟಕದ ಆವರಣದಲ್ಲಿ ಕ.ರಾ.ರ.ಸಾ.ಸಂಸ್ಥೆ ಕೆಂಪೇಗೌಡ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಕೆಂಪೇಗೌಡರ 502ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ ಮಾತನಾಡಿ, ನಾಡಪ್ರಭು ಕೆಂಪೇಗೌಡ ತ್ಯಾಗಕ್ಕೆ ಹೆಸರುವಾಸಿಯಾದ ವ್ಯಕ್ತಿ. ಅಂತಹ ವ್ಯಕ್ತಿಯ ಸ್ಮರಣೆ ಮಾಡಿಕೊಳ್ಳುವ ಮೂಲಕ ಅವನ ಆದರ್ಶ ಜೀವನ, ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕೆಂದರು.
ಸಾನಿಧ್ಯ ವಹಿಸಿದ್ದ ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರ ಸ್ವಾಮೀಜಿ, ದೇಗುಲಮಠದ ಮುಮ್ಮಡಿ ಮಹಾಲಿಂಗ ಸ್ವಾಮೀಜಿಗಳು ಮಾತನಾಡಿ, `ನಮ್ಮನ್ನು ಆಳುತ್ತಿರುವ ಜನಪ್ರತಿನಿಧಿಗಳು ಕೆಂಪೇಗೌಡರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ರಾಜ್ಯ ಸುಭಿಕ್ಷವಾಗುತ್ತದೆ. ಇಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ಸಾರಿಗೆ ಸಿಬ್ಬಂದಿ ಮಾತ್ರ ಆಚರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ಆಚರಿಸುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ರಾಮನಗರ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಸ್.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ರೂರಲ್ ಕಾಲೇಜಿನ ನಿವೃತ್ತ ಉಪನ್ಯಾಸ ಪ್ರೊ.ತಿಮ್ಮೇಗೌಡ ಕೆಂಪೇಗೌಡರ ಜೀವನ ಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದರು.
ಮರಳವಾಡಿ ಶಿವಗಿರಿ ಮಠದ ಮೃತ್ಯಂಜಯ ಸ್ವಾಮಿಜಿ, ಬೆಂಗಳೂರು ವಿಭಾಗದ ಗೌರವಾಧ್ಯಕ್ಷ ಪುರುಷೋತ್ತಮ್, ಕನಕಪುರ ಘಟಕದ ವ್ಯವಸ್ಥಾಪಕ ಕೆ.ಪಿ. ನಾಗರಾಜೇ ಗೌಡ, ಜಿ. ಪಂ. ಸದಸ್ಯ ಇಕ್ಬಾಲ್ ಹುಸೇನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿಲೀಪ್, ಎಂ.ಡಿ.ವಿಜಯದೇವು, ಸಂಘದ ಅಧ್ಯಕ್ಷ ಪ್ರಕಾಶ್ ಗೌಡ, ಸಂಸ್ಥೆಯ ಕಲ್ಲಹಳ್ಳಿ ಕುಮಾರ್, ಪುಟ್ಟರಾಜು, ರಮೇಶ್, ವಸಂತ್, ಚಂದ್ರೇಗೌಡ, ಮಾರೇಗೌಡ, ನಂಜೇಗೌಡ, ನಾಗರಾಜು, ಗುರಪ್ಪ ಇತರರು ಪಾಲ್ಗೊಂಡಿದ್ದರು.