ಶಿವಮೊಗ್ಗ:ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜು ಆರಂಭವಾಗಿ 75 ವರ್ಷಗಳಾಗಿವೆ. ಕಾಲೇಜಿನ ಪಾರಂಪರಿಕ ಕಟ್ಟಡವನ್ನು ನವೀಕರಣದ ನೆಪದಲ್ಲಿ ಕೆಡವಲಾಗಿದೆ. ಸುಮಾರು 1,500 ವಿದ್ಯಾರ್ಥಿಗಳಿಗೆ ಶೌಚಾಲಯ ಇಲ್ಲ ಎಂದು ಆರೋಪಿಸಿದರು.
ಶೌಚಾಲಯಕ್ಕೆ ಕಾಲೇಜಿನಲ್ಲಿ ಯಾವುದೇ ತಾತ್ಕಾಲಿಕ ವ್ಯವಸ್ಥೆ ಇಲ್ಲ. ಇದು ಆಡಳಿತ ಮಂಡಳಿಯ ಬೇಜವಾಬ್ದಾರಿ. ಇಲ್ಲಿನ ಕ್ಯಾಂಟಿನ್ ವ್ಯವಸ್ಥೆ ಕೂಡ ಸರಿಯಿಲ್ಲ. ಆವರಣದಲ್ಲಿದ್ದ ಮರಗಳನ್ನೂ ಕಡಿಯಲಾಗಿದೆ ಎಂದು ದೂರಿದರು.
ವಿದ್ಯಾರ್ಥಿನಿಯರಿಗೆ ತಕ್ಷಣ ಸೌಕರ್ಯ ಕಲ್ಪಿಸಬೇಕು. ಕ್ಯಾಂಟಿನ್ನಲ್ಲಿ ಸ್ವಚ್ಛತೆ ಕಾಪಾಡಬೇಕು. ರುಚಿಕರ ಆಹಾರ ಕಡ್ಡಾಯ ಮಾಡಬೇಕು. ಕಟ್ಟಡ ನಿರ್ಮಾಣಕ್ಕೆ ಮರ ಅಡ್ಡಿಯಾಗಿ ತೆರವುಗೊಳಿಸುವುದು ಅನಿವಾರ್ಯವಾದರೆ ಮತ್ತೊಂದು ಸಸಿ ನೆಟ್ಟು ಪೋಷಿಸಬೇಕು. ಗುಣಮಟ್ಟ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ನಗರ ಸಹ ಕಾರ್ಯದರ್ಶಿ ತಿಲಕ್, ಮಂಜುನಾಥ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.