ಶಿವಮೊಗ್ಗ: ಕಾಯಕ ಮತ್ತು ಶ್ರದ್ಧೆ ಇದ್ದಾಗ ಜೀವನದಲ್ಲಿ ಉಜ್ವಲತೆ ಕಾಣಲು ಸಾಧ್ಯ. ದೇಹವನ್ನು ದುಡಿಮೆಗೆ, ಮನಸ್ಸನ್ನು ಭಗವಂತನಿಗೆ ಅರ್ಪಿಸಿ ಜೀವನದಲ್ಲಿ ಮುನ್ನಡೆಯಲು ಸಾಧ್ಯ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಂಗಳವಾರ ರಂಭಾಪುರಿ ಶ್ರೀಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಆರೋಗ್ಯ ಪೂರ್ಣ ಸಮಾಜ ನಿರ್ಮಾಣದ ಹೊಣೆ ಹೊರ ಬೇಕಾದವರು ಸಮಾಜದ ಬೆಳವಣಿಗೆ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ನೋವಿನ ಸಂಗತಿ. ಮನುಷ್ಯನ ಬುದ್ಧಿ ಶಕ್ತಿ ಬೆಳೆದಷ್ಟು ಭಾವನೆಗಳು ಬೆಳೆಯುತ್ತಿಲ್ಲ. ಭಾರತೀಯ ಸಂಸ್ಕೃತಿ ಆದರ್ಶಗಳು ಕಣ್ಮರೆಯಾಗಿ ಮಾನವೀಯ ಸಂಬಂಧಗಳು ಕ್ಷೀಣಿಸುತ್ತಿವೆ. ತಮ್ಮ ಬೆಳವಣಿಗೆಗೆ ಪೂರಕವಾದ ಶಕ್ತಿ ಒದಗಿಸಿದ ಹೆತ್ತ ತಾಯ್ತಂದೆಯರನ್ನು ದೂರ ಮಾಡುವ ಪ್ರವೃತ್ತಿ ಕಂಡು ಬರುತ್ತಿದೆ ಎಂದರು.
ಹಿಂದೂ ಧರ್ಮದ ಸಾರವನ್ನು ಮಕ್ಕಳಿಗೆ ತಿಳಿಸಿ ಹೇಳುವ ಅವಶ್ಯಕತೆಯಿದೆ. ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿ ಬೆಳೆಸುವ ಜವಾಬ್ದಾರಿ ತಾಯ್ತಂದೆಯರ ಮೇಲಿದೆ ಎಂದುವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡರು ಹೇಳಿದರು.
ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯೆ ಪ್ರೊ.ಕಿರಣ ದೇಸಾಯಿ, ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಹಾರನಹಳ್ಳಿ ರಾಮಲಿಂಗೇಶ್ವರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಆಶೀರ್ವಾದ ಪಡೆದರು. ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಕವಿತಾ ಮತ್ತು ಜೆ.ಎನ್.ಓಂಕಾರಪ್ಪ ಹಾಗೂ ಗದುಗಿನ ವಿಶಾಲಾಕ್ಷಿ ಮತ್ತು ಪಂಚಪ್ಪ ಕುಬಸದ ದಂಪತಿಯನ್ನು ಶ್ರೀಗಳು ಆಶೀರ್ವದಿಸಿದರು. ಅನಿತಾ ಜವಳಿ ಸ್ವಾಗತಿಸಿದರು. ಹೊನ್ನಾಳಿ ಚನ್ನಬಸಪ್ಪ ನಿರೂಪಿಸಿದರು.