ಸಾಗರ: ಇಲ್ಲಿನ ತಾಯಿ-ಮಗು ಸರ್ಕಾರಿ ಆಸ್ಪತ್ರೆಯ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಅಲ್ಲಿನ ವಾತಾವರಣವನ್ನು ಸುಧಾರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ವೈದ್ಯಾಧಿಕಾರಿಗೆ ಸೂಚಿಸಿದರು.
ಶಿವಮೊಗ್ಗ ರಸ್ತೆಯಲ್ಲಿರುವ ತಾಯಿ-ಮಗು ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ₹ 4 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಆಸ್ಪತ್ರೆಗೆ ಜನರು ಬಂದರೆ ಕಿರಿಕಿರಿಯಾಗದಂತೆ ಪರಿಸರವನ್ನು ನಿರ್ಮಿಸಬೇಕು ಎಂದರು.
60 ಹಾಸಿಗೆ ಸಾಮರ್ಥ್ಯದ ತಾಯಿ-ಮಗು ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುತ್ತಿದೆ. ಆಸ್ಪತ್ರೆಗೆ ಅಗತ್ಯವಿರುವ ಹೆಚ್ಚುವರಿ ಕಟ್ಟಡದ ಕಾಮಗಾರಿ ಭರದಿಂದ ಸಾಗಿದೆ. ಊಟದ ಹಾಲ್, ಕ್ಯಾಂಟೀನ್, ವಾಹನಗಳ ನಿಲುಗಡೆಗೆ ಸ್ಥಳ, ಉದ್ಯಾನ ಸೇರಿ ಹಲವು ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕೆ. ಪರಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ಕೆ.ಎಸ್., ಪ್ರಮುಖರಾದ ಚೇತನ್ ರಾಜ್ ಕಣ್ಣೂರು, ವೈ. ಮೋಹನ್, ಟಿ.ಪಿ. ರಮೇಶ್, ಅಶೋಕ್ ಬೇಳೂರು, ಬಸವರಾಜ್ ಇದ್ದರು.