ಶಿವಮೊಗ್ಗ: ಭೂಪಾಳಂ ಚಂದ್ರಶೇಖರಯ್ಯ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ. ಶಂಕರಪ್ಪ ಹೇಳಿದರು.
ನಗರದ ಗೋಪಿಶೆಟ್ಟಿಕೊಪ್ಪ ದಲ್ಲಿರುವ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಿಂದ ಭಾನುವಾರ ಹಮ್ಮಿಕೊಂಡಿದ್ದ ‘ಭೂಪಾಳಂ ಆರ್. ಚಂದ್ರಶೇಖರಯ್ಯ ದತ್ತಿ ಉಪನ್ಯಾಸ’ ಕಾರ್ಯಕ್ರಮ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳಿಂದ ಕಷ್ಟಪಟ್ಟು ಬರುತ್ತಿದ್ದ ವಿದ್ಯಾರ್ಥಿಗಳಿಗೆ ಅಗತ್ಯ ಇದ್ದ ಸಂದರ್ಭಗಳಲ್ಲಿ ನೆರವು ನೀಡುತ್ತಿದ್ದರು. ನಗರದ ವಿವಿಧ ವಸತಿ ನಿಲಯಗಳಿಗೆ ಆಗಾಗ ಭೇಟಿ ನೀಡುತ್ತಿದ್ದ ಅವರು ವಿದ್ಯಾರ್ಥಿಗಳಿಗೆ ಏನಾದರೂ ಸಮಸ್ಯೆ, ಆರೋಗ್ಯ ತೊಂದರೆ ಇದ್ದರೆನೆರವು ನೀಡುತ್ತಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಆರ್.ಎನ್. ಈಶ್ವರಪ್ಪ, ‘ಭೂಪಾಳಂ ಚಂದ್ರಶೇಖರಯ್ಯ ಅವರು ಸಮಾಜ ಸೇವೆಯಲ್ಲಿ ಸದಾ ತೊಡಗಿಸಿಕೊಳ್ಳುತ್ತಿದ್ದರು. ಸಾಹಿತ್ಯ ಚಟುವಟಿಕೆಗೂ ಪ್ರೋತ್ಸಾಹಿಸುತ್ತಿದ್ದರು’ ಎಂದರು.
ತಾಲ್ಲೂಕು ಸಾಹಿತ್ಯ ಪರಿಷತ್ ಕಾರ್ಯಾಧ್ಯಕ್ಷೆ ಶ್ರೀರಂಜನಿ ದತ್ತಾತ್ರಿ, ‘ದತ್ತಿ ಉಪನ್ಯಾಸದ ಕಾರ್ಯಕ್ರಮಗಳಿಂದ ಕನ್ನಡ ಸಾಹಿತ್ಯ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆಯಲು ಸಾಧ್ಯ. ಜಿಲ್ಲೆಯಲ್ಲಿ ಹೆಚ್ಚಿನ ದತ್ತಿ ಉಪನ್ಯಾಸಗಳು ನಡೆಯುತ್ತಿರುವುದು ಸಂತಸದ ಸಂಗತಿ’ ಎಂದು ತಿಳಿಸಿದರು.
ಸಾಹಿತಿ ಕೆ. ಚನ್ನಪ್ಪ ಉಪನ್ಯಾಸ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ರುದ್ರಮುನಿ ಎನ್. ಸಜ್ಜನ್, ಕೋಶಾಧ್ಯಕ್ಷೆ ಎಸ್.ವಿ. ಚಂದ್ರಕಲಾ ಅರಸ್, ಉಪಾಧ್ಯಕ್ಷ ಕೆ. ಬಸವನಗೌಡ, ಡಾ.ಎನ್.ಆರ್. ಮಂಜುಳಾ, ಹಸನ್ ಬೆಳ್ಳಿಗನೂಡು, ಜಿ.ಎಸ್. ಅನಂತ್, ನಾಗರಾಜ್ ಇದ್ದರು.