ಸಾಗರ: ‘ಅಭಿವೃದ್ಧಿ ರಾಜಕಾರಣಕ್ಕೆ ಮನ್ನಣೆ ನೀಡುತ್ತಿರುವುದು ಬಿಜೆಪಿಯ ಯಶಸ್ಸಿನ ಗುಟ್ಟಾಗಿದೆ’ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಸೇರ್ಪಡೆಯಾದವರನ್ನು ಸ್ವಾಗತಿಸಿ ಮಾತನಾಡಿದರು.
‘ವಿವಿಧ ಪಕ್ಷಗಳ ಪ್ರಮುಖರು ತಮ್ಮ ಪಕ್ಷವನ್ನು ತೊರೆದು ಬಿಜೆಪಿಗೆ ಸೇರುತ್ತಿರುವುದು ಅಭಿವೃದ್ಧಿ ರಾಜಕಾರಣಕ್ಕೆ ಕೈಜೋಡಿಸುವ ಸಲುವಾಗಿಯೇ ಹೊರತು ಇತರ ಕಾರಣಗಳಿಗೆ ಅಲ್ಲ. ದೇಶದಲ್ಲಿ ನರೇಂದ್ರ ಮೋದಿಯವರ ಪರ ಅಲೆ ಜೋರಾಗಿದೆ ಎಂಬುದಕ್ಕೆ ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಸಾಕ್ಷಿ. ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಯಡಿಯೂರಪ್ಪ ನೇತೃತ್ವದ ಆಡಳಿತಕ್ಕೆ ಜನರು ಬೆಂಬಲ ನೀಡಿರುವ ದ್ಯೋತಕ’ ಎಂದು ಹೇಳಿದರು.
ಸ್ಥಳೀಯವಾಗಿಯೂ ಇಲ್ಲಿನ ಹಲವು ಪಕ್ಷಗಳ ಪ್ರಮುಖರು ಅಭಿವೃದ್ಧಿ ಕಾರ್ಯವನ್ನು ನೋಡಿ ಬಿಜೆಪಿಗೆ ಬರುತ್ತಿದ್ದಾರೆ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಕಲಸೆ ಚಂದ್ರಪ್ಪ, ನಾಡಕಲಸಿ ಪಂಚಾಯಿತಿ ವ್ಯಾಪ್ತಿಯ ಕೃಷ್ಣಮೂರ್ತಿ ಬೊಮ್ಮತ್ತಿ, ಶಿವಮೂರ್ತಿ ಉಂಬಳಿಬೈಲು, ಪಡವಗೋಡು ಪಂಚಾಯಿತಿ ವ್ಯಾಪ್ತಿಯ ಬಂಗಾರಪ್ಪ ಪಡವಗೋಡು, ಕೃಷ್ಣಮೂರ್ತಿ, ಪರಶುರಾಮ್ ಸೇರಿ 30ಕ್ಕೂ ಹೆಚ್ಚು ಪ್ರಮುಖರು ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ಲೋಕನಾಥ್ ಬಿಳಿಸಿರಿ, ಕೆ.ಆರ್. ಗಣೇಶ್ ಪ್ರಸಾದ್, ಮಧುರಾ ಶಿವಾನಂದ್, ವಿ. ಮಹೇಶ್ ಇದ್ದರು.