ಶಿವಮೊಗ್ಗ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೇಲರ್ ಕನ್ಹಯ್ಯ ಲಾಲ್ ಅವರ ಹತ್ಯೆ ಖಂಡಿಸಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ಸ್ಟೇಟ್ ಟೇಲರ್ ಅಸೋಸಿಯೇಷನ್ ಉತ್ತರ ವಲಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಂತರ ಪ್ರತಿಭಟನಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕನ್ಹಯ್ಯ ಲಾಲ್ ಹತ್ಯೆ ಖಂಡನೀಯ. ಪ್ರಸ್ತುತ ಟೇಲರ್ ವೃತ್ತಿಯವರು ಅಸಂಘಟಿತ ವಲಯದ ಭಾಗವಾಗಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಜನರು ರಾಜ್ಯದಲ್ಲಿ ವೃತ್ತಿ ಮಾಡುತ್ತಿದ್ದಾರೆ. ಸರ್ಕಾರದ ವತಿಯಿಂದ ಯಾವುದೆ ಭದ್ರತೆ ಹಾಗೂ ಸೌಕರ್ಯವು ಇದುವರೆಗೂ ಲಭಿಸಿಲ್ಲಎಂದರು.
‘ಸರ್ಕಾರ ಟೇಲರ್ ವೃತ್ತಿ ಮಾಡುವವರಿಗೆ ಕ್ಷೇಮಾಭಿವೃದ್ಧಿ ಮಂಡಳಿ ರಚಿಸುವ ಮೂಲಕ ನಮ್ಮ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕು. ಉದಯಪುರದಲ್ಲಿ ಹತ್ಯೆಯಾದ ಕನ್ಹಯ್ಯ ಲಾಲ್ ಅವರ ಕುಟುಂಬಕ್ಕೆ ನ್ಯಾಯೋಜಿತ ಪರಿಹಾರ ಒದಗಿಸಬೇಕು. ಹಾಗೂ ಈ ಕೃತ್ಯ ಎಸಗಿದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿಯಲ್ಲಿಆಗ್ರಹಿಸಲಾಗಿದೆ.
ಉತ್ತರ ವಲಯ ಸಮಿತಿ ಅಧ್ಯಕ್ಷ ಜೆ.ಡಿ. ಗಣೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್, ಖಜಾಂಚಿ ಆರ್. ಮಂಜುನಾಥ್, ನಾಗರಾಜ್, ಚಂದ್ರಕಲಾ, ಅನಿತಾ, ನೂರ್ ಅಹಮ್ಮದ್, ವಿನಯ್, ರೂಪೇಶ್, ವಸಂತ್, ನಾಗರಾಜ್, ಚೇತನ್ ಇದ್ದರು.