ಭದ್ರಾವತಿ: ಇಲ್ಲಿನ ಜೈನ ಸಭಾ ಭವನದಲ್ಲಿ ಜೈನ ಆಚಾರ್ಯತ್ರಯರ ನೇತೃತ್ವದಲ್ಲಿ ಶನಿವಾರ 23ನೇ ತೀರ್ಥಂಕರ ಪಾರ್ಶ್ವನಾಥಜೀ ಮಹಾರಾಜ್ ಅವರ ಜನ್ಮದಿನ ಹಾಗೂ ದೀಕ್ಷಾ ಸಮಾರಂಭ ನಡೆಯಿತು.
ಜೈನ ಭವನದಿಂದ ಪಾರ್ಶ್ವನಾಥ ಭಾವಚಿತ್ರದ ಜತೆಗೆ ಶಾಂತಿ, ಸಹಬಾಳ್ವೆ ಸಾರುವ ಜೈನ ಧ್ವಜಗಳನ್ನು ಹಿಡಿದು ನೂರಾರು ಮಂದಿ ನಗರದ ಪ್ರಮುಖ ರಸ್ತೆಯಲ್ಲಿ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು.
ಜೈನ ಮುನಿಗಳಾದ ಹೀರಾಚಂದ್ರ ಸುರೀಶ್ವರಜೀ, ರುಷಿಲಾಲ್ ವಿಜಯಜೀ, ಜಮಾ ರತನ ವಿಜಯಜೀ ಅವರು ಭಕ್ತರ ಜತೆಗೆ ಹೆಜ್ಜೆಹಾಕಿ ತೀರ್ಥಂಕರರ ಸಂದೇಶ ಸಾರಿದರು.
ನಂತರ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಮುನಿಗಳು, ‘ಸರ್ವವೂ ದೇವರಿಗೆ ಅರ್ಪಿತ. ಇದರೊಂದಿಗೆ ಶಾಂತಿ, ಸಹಬಾಳ್ವೆ, ನೊಂದವರ ಬಾಳಿಗೆ ಬೆಳಕು ನೀಡುವ ಕೆಲಸ ಮಾಡುವುದೇ ನೈಜ ಅಧ್ಯಾತ್ಮ’ ಎಂದರು.
ಜೈನ ಸಮಾಜದ ಮುಖಂಡರಾದ ರತನ್ ಚಂದ್, ದಿನೇಶಕುಮಾರ್, ಭರತಕುಮಾರ್, ಸುಧೀಶ್, ವಿಕ್ರಂ ಹಾಜರಿದ್ದರು.
ಐದು ವರ್ಷದ ಹಿಂದೆ ಇಲ್ಲಿಯೇ ಸನ್ಯಾಸ ಸ್ವೀಕಾರ ಮಾಡಿದ್ದ ರುಷಿಲಾಲ್ ವಿಜಯಜೀ ಹಾಗೂ ಜಮಾ ರತನ ವಿಜಯಜೀ ಅವರು ನಿರಂತರ ದೇಶ ಸಂಚಾರ ನಡೆಸಿ ಪುನಃ ಇಲ್ಲಿಗೆ ಬಂದು ಎರಡು ದಿನಗಳ ಕಾಲ 23ನೇ ತೀರ್ಥಂಕರರ ದೀಕ್ಷಾ ಮಹೋತ್ಸವ ನಡೆಸಿಕೊಟ್ಟಿದ್ದು ವಿಶೇಷ.