ಹೊಸನಗರ: ಚುನಾವಣೆಯಲ್ಲಿ ಮತ ಗಿಟ್ಟಿಸಲು ಶರಾವತಿ ಸಂತ್ರಸ್ತರ ವಿಚಾರದಲ್ಲಿ ಬಿಜೆಪಿ ಗಿಮಿಕ್ ಮಾಡುತ್ತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಶಾಸಕ ಹಾಲಪ್ಪ ಹರತಾಳು ಅವರಿಗೆ ಈಗ ಸಂತ್ರಸ್ತರ ನೆನಪಾಗಿದೆ. ಸಲ್ಲದ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ಇದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ಶಾಸಕದ್ವಯರು ರೈತ ವಿರೋಧಿಗಳಾಗಿದ್ದಾರೆ. ಅವರಿಂದ ಈ ವರೆಗೆ ರೈತರ ಪರ ಒಂದೇ ಕೆಲಸ ಜಾರಿಯಾಗಿಲ್ಲ. ಬಗರ್ಹುಕುಂ, 94ಸಿ ಹಕ್ಕುಪತ್ರದ ಕನಸು ಕನಸಾಗಿಯೇ ಉಳಿದಿದೆ. ಮೂರು ಬಾರಿ ಚುನಾಯಿತರಾದರೂ, ಶರಾವತಿ ಸಂತ್ರಸ್ತರ ಸಮಸ್ಯೆಗೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಡಿನೋಟಿಫಿಕೇಶನ್ ಮಾಡಿ ಜನರಿಗೆ ಭೂ ಮಂಜೂರಾತಿಗೆ ಮುಂದಾಗಿತ್ತು. ಆದರೆ ಈಗ ನ್ಯಾಯಾಲಯದ ಆದೇಶ ಎಂದು ಹಿಂದಿನ ಡಿನೋಟಿಫಿಕೇಶನ್ ಆದೇಶವನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಬದಲಾಗಿ ರದ್ದು ಮಾಡಿದೆ’ ಎಂದು ಆರೋಪಿಸಿದರು.
ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಬಿ.ಜಿ. ನಾಗರಾಜ್, ಚಂದ್ರಮೌಳಿ ಗೌಡ, ಬಿ.ಆರ್. ಪ್ರಭಾಕರ, ಮಹಾಬಲರಾವ್, ಸದಾಶಿವ ಶ್ರೇಷ್ಠಿ, ಪ್ರವೀಣ್ ಬ್ರಂದಾವನ, ಹಿಟ್ಟು ಗುರುರಾಜ್, ನಸೀರಾ, ಸಿಂಥಿಯ, ಅಶ್ವಿನಿ ಇದ್ದರು.