ಶಿವಮೊಗ್ಗ: ಪದವೀಧರರ ಸಹಕಾರ ಸಂಘ 2021-22ನೇ ಸಾಲಿನಲ್ಲಿ ₹173.6 ಕೋಟಿ ವ್ಯವಹಾರ ನಡೆಸಿ ₹1.01 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 6500ಕ್ಕೂ ಹೆಚ್ಚು ಸದಸ್ಯರಿದ್ದು, ಅವರಿಂದ ₹61.79 ಕೋಟಿ ಠೇವಣಿ ಸಂಗ್ರಹಿಸಿದ್ದು, ₹47.85 ಕೋಟಿ ಸಾಲ ನೀಡಲಾಗಿದೆ ಎಂದರು.
ಸಂಘದ ಸುವರ್ಣ ಮಹೋತ್ಸವದ ನೆನಪಿಗಾಗಿ ಕೃಷಿ ನಗರದಲ್ಲಿ ₹91.50 ಲಕ್ಷ ವೆಚ್ಚದಲ್ಲಿ ಖರೀದಿಸಿದ ನಿವೇಶನದಲ್ಲಿ ₹2.69 ಕೋಟಿ ವೆಚ್ಚದಲ್ಲಿ 4 ಅಂತಸ್ತಿನ ನೂತನ ಶಾಖಾ ಕಟ್ಟಡ ನಿರ್ಮಿಸುತ್ತಿದ್ದು, ಮೊದಲ ಅಂತಸ್ತಿನಲ್ಲಿ ಶಾಖಾ ಕಚೇರಿ, ಎರಡನೇ ಅಂತಸ್ತಿನಲ್ಲಿ 1500 ಲಾಕರ್ವುಳ್ಳ ಲಾಕರ್ ಪ್ಲಾಜಾ ಹಾಗೂ ಇನ್ನೊಂದು ಅಂತಸ್ತಿನಲ್ಲಿ ಸ್ಫರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವಿರುವ ಮಿನಿ ಅಡಿಟೋರಿಯಂ ಇರುತ್ತದೆ ಎಂದರು.
ಸೆ. 17ರ ಸಂಜೆ 5.30ಕ್ಕೆ ಸವಳಂಗ ರಸ್ತೆಯಲ್ಲಿರುವ ಸರ್ಜಿ ಕನ್ವೆನ್ಷನ್ ಹಾಲ್ನಲ್ಲಿ ಹಮ್ಮಿಕೊಂಡಿರುವ ಸಂಘದ ಸುವರ್ಣ ಮಹೋತ್ಸವ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಲಿದ್ದು, ನೂತನ ಶಾಖಾ ಕಟ್ಟಡಕ್ಕೆ ಬಸವ ಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು.
ಅತಿಥಿಯಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಮಂಜುನಾಥ ಭಂಡಾರಿ, ಡಿ.ಎಸ್. ಅರುಣ್, ಸಹಕಾರ ಸಂಘಗಳ ನಿಬಂಧಕ ಡಾ.ರಾಜೇಂದ್ರ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಎಸ್.ಮಮತಾ, ನಿರ್ದೇಶಕರಾದ ಜೋಗದ ವೀರಪ್ಪ, ಎಚ್.ಸಿ.ಸುರೇಶ್, ಎಸ್.ರಾಜಶೇಖರ್, ಡಾ.ಎಸ್.ಎಚ್.ಪ್ರಸನ್ನ, ಡಾ.ಯು.ಚಂದ್ರಶೇಖರಪ್ಪ, ಎಸ್.ಕೆ.ಕೃಷ್ಣಮೂರ್ತಿ, ಯು.ರಮ್ಯಾ, ಡಿ.ಎಸ್.ಭುವನೇಶ್ವರಿ, ಕಾರ್ಯದರ್ಶಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.