ತೀರ್ಥಹಳ್ಳಿ: ಕಂದಾಯ ಇಲಾಖೆ ಹೊರಡಿಸಿದ ಅದೇಶದಂತೆ ವ್ಯವಸಾಯ ಉದ್ದೇಶಕ್ಕೆ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಗುರುವಾರ ತಾಲ್ಲೂಕು ಕಚೇರಿ ಮುಂಭಾಗ ಮಾಜಿ ಸೈನಿಕರು ಪ್ರತಿಭಟನೆ ನಡೆಸಿದರು.
ಸರ್ಕಾರಿ ಬಂಜರು, ಸರ್ಕಾರಿ ಬೀಳು, ಗೋಮಾಳ, ಸೊಪ್ಪಿನಬೆಟ್ಟ ಇತ್ಯಾದಿ ಜಾಗದಲ್ಲಿ ಭೂಮಿ ಮಂಜೂರು ಮಾಡಬೇಕು. ಒತ್ತುವರಿ ಸಕ್ರಮಕ್ಕೆ ಅರ್ಜಿ ಸಲ್ಲಿಕೆ ಆಗಿವೆ. ಸೈನಿಕರ ಅರ್ಜಿಗೆ ಹಿಂಬರಹ ಸಿಗುತ್ತಿದೆ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶಿವಪ್ಪಕೆ.ಎನ್. ದೂರಿದರು.
ರಾಜ ಮಹಾರಾಜರ ಕಾಲದಿಂದ ಸ್ವಾತಂತ್ರ್ಯಾನಂತರವೂ ಪ್ರತಿ ಗ್ರಾಮದಲ್ಲಿ 100 ಎಕರೆ ಭೂಮಿಯಲ್ಲಿ 10 ಎಕರೆ ಕೃಷಿ ಯೋಗ್ಯ ಭೂಮಿಯನ್ನು ಸೈನಿಕರಿಗೆ ನೀಡಲಾಗಿದೆ. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಸೈನಿಕರ ಸೇವೆಯನ್ನು ಪರಿಗಣಿಸದೆ ಇತ್ತೀಚೆಗೆ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.
ವಿಶೇಷ ಕೋಟಾದ ಅಡಿಯಲ್ಲಿ ಸೈನಿಕರಿಗೆ ಜಮೀನು ಮಂಜೂರು ಮಾಡುವಾಗ ಬಗರ್ಹುಕುಂ ಮಾನದಂಡಗಳನ್ನು ಪರಿಗಣಿಸದೆ ಜಾಗ ಮಂಜೂರು ಮಾಡಲು ಕ್ರಮ ವಹಿಸಬೇಕು ಎಂದು ಸೈನಿಕರು ಒತ್ತಾಯಿಸಿದರು.