ಗುರುವಾರ , ಮಾರ್ಚ್ 23, 2023
22 °C
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿದ ಸಚಿವ

ಆಯನೂರಿಗೆ ಕ್ರೀಡಾಂಗಣದ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂಸಿ: ಗ್ರಾಮಾಂತರ ಪ್ರದೇಶದಲ್ಲಿ ಜಾಗವಿದ್ದರೂ ಕ್ರೀಡಾಂಗಣಗಳಿಲ್ಲ. ಮುಂದಿನ ದಿನಗಳಲ್ಲಿ ಆಯನೂರಿಗೆ ಗ್ರಾಮಾಂತರ ಕ್ರೀಡಾಂಗಣ ಕಲ್ಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಸಮೀಪದ ಆಯನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನ ಇಣುಕು ಮಾಸಿಕ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಗ್ರಾಮಾಂತರ ಪ್ರದೇಶಕ್ಕೆ ಪ್ರಥಮ ದರ್ಜೆ ಕಾಲೇಜು ಬೇಕು ಎಂಬ ಬೇಡಿಕೆ ಇತ್ತು. ನಮ್ಮ ಸರ್ಕಾರ ಬಂದ ನಂತರ ಅದು ಸಾಕಾರಗೊಂಡಿದೆ. ಗ್ರಾಮಾಂತರ ಪ್ರದೇಶದಲ್ಲಿ ಪ್ರಥಮ ದರ್ಜೆ ಕಾಲೇಜು ಆರಂಭವಾಗಿರುವುದರಿಂದ ಶೇ 80ರಷ್ಟು ಹೆಣ್ಣುಮಕ್ಕಳು ಪದವಿ ಪೂರ್ಣಗೊಳಿಸುತ್ತಿದ್ದಾರೆ’ ಎಂದು ಹೇಳಿದರು.

‘ಇಂದಿನ ಶಿಕ್ಷಣ ಪೊಲೀಸ್, ಲಾಯರ್, ಎಂಜಿನಿಯರ್‌ಗಳನ್ನು ಕೊಡುತ್ತಿದೆ. ಆದರೆ, ಒಳ್ಳೆಯ ಮನುಷ್ಯನನ್ನು ಕೊಡುತ್ತಿಲ್ಲ. ಇಂದು ಒಳ್ಳೆಯ ಹುದ್ದೆಯಲ್ಲಿರುವವರೇ ಜೈಲು ಸೇರಿದ್ದಾರೆ. ಆದಕಾರಣ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ’ ಎಂದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ‘₹ 2 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕಾಲೇಜು ಲೋಕಾರ್ಪಣೆಯಾಗುತ್ತಿರುವುದು ಸಂತಸದ ವಿಚಾರ. ಇದಕ್ಕಾಗಿ ಶ್ರಮವಹಿಸಿದ ಆಯನೂರು ಮಂಜುನಾಥ್‌ ಅವರಿಗೆ ಅಭಿನಂದನೆಗಳು’ ಎಂದರು.

ಇದೇ ಸಂದರ್ಭದಲ್ಲಿ ಆಯನೂರು ಸಮುದಾಯ ಆಸ್ಪತ್ರೆಯ ಎಲ್ಲಾ ಕೊರೊನಾ ವಾರಿಯರ್‌ಗಳನ್ನು ಸನ್ಮಾನಿಸಲಾಯಿತು.

ಮೂರು ಹೋಬಳಿಗೂ ಸಮೀಪಿಸುವ ಕಾಲೇಜು: ನೂತನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯನೂರು, ಕುಂಸಿ, ಹಾರನಹಳ್ಳಿ ಹೋಬಳಿಗೂ ಸಮೀಪಿಸುವ ಮಾರ್ಗವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ರಾಜ್ಯದ ನೂತನ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಆಯನೂರಿನ ಕಾಲೇಜು 30 ಎಕರೆ ವಿಸ್ತೀರ್ಣ ಹೊಂದಿದ್ದು, ವಿಶಾಲ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಲ್ಲಿಯೇ ಪಂಚಾಯಿತಿ ಮಟ್ಟದಲ್ಲಿ ಮೊಟ್ಟಮೊದಲ ವಿಜ್ಞಾನ ಉಪಕೇಂದ್ರ ಇರುವುದು ಆಯನೂರಿನಲ್ಲಿಯೇ ಎಂದು ಸಂತಸ ವ್ಯಕ್ತಪಡಿಸಿದರು.

ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕಮತ್ತು ಮುಖಂಡರು ಇದ್ದರು.

ಕಾಲೇಜಿಗೆ ಪೀಠೋಪಕರಣಕ್ಕೆ ಕೋರಿಕೆ

ಕಾಲೇಜಿನ ಪ್ರಾಚಾರ್ಯ ರಾಮಚಂದ್ರ ದೇವರು ಹೆಗಡೆ ಮಾತನಾಡಿ, ‘ನೂತನ ಕಾಲೇಜು ಉದ್ಘಾಟನೆಗೊಳ್ಳುತ್ತಿರುವುದು ಸಂತೋಷದ ವಿಷಯ. ಆದರೆ, ಹೊಸ ಕಟ್ಟಡದಲ್ಲಿ ಕನಿಷ್ಠ 50ರಿಂದ 60 ಬೆಂಚುಗಳ ಅವಶ್ಯಕತೆ ಇದೆ. ಲ್ಯಾಬ್‌ನಲ್ಲಿ 15 ಕಂಪ್ಯೂಟರ್‌ಗಳ ಮೇಜು ಅವಶ್ಯವಿದೆ. ನೂತನ ಕಾಲೇಜು ಊರಿನ ಹೊರಗಿದ್ದು, ಭದ್ರತೆ ದೃಷ್ಟಿಯಿಂದ ಕಾಲೇಜು ಆವರಣದ ಸುತ್ತ ಕಾಂಪೌಂಡ್ ನಿರ್ಮಿಸುವ ಹಾಗೂ ಇಂಟರ್‌ನೆಟ್ ಸೌಲಭ್ಯ ಒದಗಿಸಬೇಕಿದೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.