ಶಿವಮೊಗ್ಗ: ವಿಶ್ವಕರ್ಮ ಜಯಂತಿಯನ್ನು ಸೆ.17ರಂದು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಸರ್ಕಾರ ನೀಡಿದ ಅನುದಾನವನ್ನು ನೆರೆಹಾವಳಿ ಸಂತ್ರಸ್ತರಿಗೆ ನೀಡಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದು ಎಂದು ಜಿಲ್ಲಾ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಅಗರದಹಳ್ಳಿ ನಿರಂಜನಮೂರ್ತಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಅಂದು ಬೆಳಿಗ್ಗೆ 11ಕ್ಕೆ ಕುವೆಂಪು ರಂಗಮಂದಿರದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಲಾಗುವುದು. ಈ ಕಾರ್ಯಕ್ರಮಕ್ಕೆ ಸರ್ಕಾರ ಬಿಡುಗಡೆ ಮಾಡಿದ ₨ 2.50 ಲಕ್ಷದ ಜತೆ ಮಹಾಸಭಾದ ಹಣವನ್ನೂ ಪರಿಹಾರ ನಿಧಿಗೆ ನೀಡಲಾಗುವುದು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 7.30 ರಿಂದ 9.30ರವರೆಗೆ ಕೃಷಿ ನಗರದಲ್ಲಿರುವ ಗಾಯಿತ್ರಿ, ಗಣಪತಿ ಹಾಗೂ ವಿಶ್ವಕರ್ಮ ದೇವಾಲಯದಲ್ಲಿ ಹೋಮ, ಹವನ ನಡೆಯಲಿದೆ. ನಂತರ ಕುವೆಂಪು ರಂಗಮಂದಿರಕ್ಕೆ ತೆರಳಿ ಜಯಂತಿ ಆಚರಿಸಲಿದ್ದಾರೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಸೋಮಾಚಾರ್ ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಟಿ.ಆರ್.ಸತ್ಯನಾರಾಯಣ, ಎಸ್.ರಮೇಶ್, ಸೀತಾಲಕ್ಷ್ಮಿ, ರೂಪಾ ಚಂದ್ರಶೇಖರ್, ಗಂಗಣ್ಣ, ಲಿಂಗಪ್ಪ ಇದ್ದರು.