ಸಾಗರ: ‘ಸಮಾಜದಲ್ಲಿ ಶಾಂತಿ, ಸೌಹಾರ್ದಯುತ ವಾತಾವರಣ ನಿರ್ಮಿಸುವುದು ಎಲ್ಲಾ ಧರ್ಮದವರ ಆದ್ಯ ಕರ್ತವ್ಯ’ ಎಂದು ಮಜ್ಲಿಸೆ ಅನ್ ಸಾರುಲ್ಲಾಹ್ ಸಂಸ್ಥೆಯ ತಾಲ್ಲೂಕು ಘಟಕದ ಅಧ್ಯಕ್ಷ ನದೀಮ್ ಅಹ್ಮದ್ ಹೇಳಿದರು.
ಇಲ್ಲಿನ ಎಸ್.ಎನ್.ನಗರದಲ್ಲಿ ಸೋಮವಾರ ನಡೆದ ಮಜ್ಲಿಸೆ ಅನ್ ಸಾರುಲ್ಲಾಹ್ ಸಂಸ್ಥೆಯ ವಾರ್ಷಿಕ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಮುಸ್ಲಿಂ ಬಾಂಧವರು ಇತರೆ ಸಮುದಾಯದವರೊಂದಿಗೆ ಸೌಹಾರ್ದತೆಯಿಂದ ವರ್ತಿಸುವುದಕ್ಕೆ ಆದ್ಯತೆ ನೀಡಬೇಕು. ನಮ್ಮ ಧರ್ಮದ ಆಚರಣೆ, ನಂಬಿಕೆಗಳ ಜೊತೆಗೆ ಇತರರ ನಂಬಿಕೆ, ಆಚರಣೆಗಳನ್ನು ಗೌರವಿಸುವುದು ಮುಖ್ಯ. ಇಂತಹ ಭಾವನೆ ಇದ್ದಾಗ ಮಾತ್ರ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
‘ನಮ್ಮ ಬದುಕು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಪ್ರತಿಯೊಂದು ಧರ್ಮದಲ್ಲೂ ಬಹು ಸಂಸ್ಕೃತಿ ಇರುತ್ತದೆ. ಅದನ್ನು ಗೌರವಿಸುವ ಧೋರಣೆ ಮೈಗೂಡಿಸಿಕೊಳ್ಳಬೇಕು. ಬೇರೆ ಬೇರೆ ಜಾತಿ, ಧರ್ಮಗಳ ಸಮ್ಮಿಲನದಿಂದ ಸದೃಢ ಸಮಾಜ ನಿರ್ಮಾಣವಾಗುತ್ತದೆ’ ಎಂದು ಧರ್ಮಗುರು ಬುರಹಾನ್ ಅಹ್ಮದ್ ಸಾಹೇಬ್ ಹೇಳಿದರು.
ಪ್ರಮುಖರಾದ ಯುಸೂಫ್ ಶರೀಫ್, ರಶೀದ್ ಅಹ್ಮದ್, ಮಹ್ಮದ್ ಕಲಿಮುಲ್ಲಾ, ಇಮ್ತಿಯಾಜ್ ಅಹ್ಮದ್ ಇದ್ದರು.