ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ನೋಡಿದ್ದರೆ ಅದು ಬಿಜೆಪಿ ಕಾಲದಲ್ಲಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಬಿಜೆಪಿ ನಗರ ಘಟಕ ವತಿಯಿಂದ ಇಲ್ಲಿನ ಸೈನ್ಸ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಪೇಜ್ ಪ್ರಮುಖರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಆಡಳಿತಾವಧಿ ಕಾಲದಲ್ಲೂ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರಕಿತ್ತು ಎಂದರು.
4 ವರ್ಷದಲ್ಲಿ 2.15 ಲಕ್ಷ ಮನೆಗಳಿಗೆ ಶುದ್ಧ ನೀರು, ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಡಿ ಕಳೆದ 6 ವರ್ಷಗಳಲ್ಲಿ 2.61 ಲಕ್ಷ ಜನರಿಗೆ ₹260 ಕೋಟಿ ಮೊತ್ತದ ವೈದ್ಯಕೀಯ ನೆರವು ಕೊಟ್ಟಿದೆ. ಗಾರ್ಮೆಂಟ್ಸ್ ಉದ್ಯಮದ ಮೂಲಕ ಜಿಲ್ಲೆಯ 25 ಸಾವಿರ ಹೆಣ್ಣು ಮಕ್ಕಳಿಗೆ ಉದ್ಯೋಗಾವಕಾಶ ಕೊಟ್ಟಿದ್ದೇವೆ. ಎಲ್ಲ ಸಾಧನೆಗಳ ಹಿಂದೆ ಕಾರ್ಯಕರ್ತರ ಶ್ರಮ ಅಡಗಿದೆ ಎಂದರು.
ಅನೇಕ ವರ್ಷದಿಂದ ಕಾಂಗ್ರೆಸ್ ಪಕ್ಷದಿಂದ ಅಶಕ್ತರು ಹಾಗೂ ಬಡವರನ್ನು ನಿರ್ಲಕ್ಷಿಸಿಕೊಂಡೇ ಬರಲಾಗುತ್ತಿದೆ. ಇದರಿಂದ ಶೋಷಿತ ವರ್ಗಗಳನ್ನು ದೇಶದಲ್ಲಿ ಕಾಂಗ್ರೆಸ್ ಪಕ್ಷ ಕಡೆಗಣಿಸಿದೆ. ಜಿಲ್ಲೆಯಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಿ, ಬಡವರ ಕಲ್ಯಾಣಕ್ಕೆ ಶ್ರಮಿಸಲಾಗುತ್ತಿದೆ ಎಂದರು.
ಚುನಾವಣೆ ನಿರ್ವಹಣಾ ಸಮಿತಿ ಜಿಲ್ಲಾ ಉಸ್ತುವಾರಿ ಆರ್.ಕೆ.ಸಿದ್ರಾಮಣ್ಣ ಮಾತನಾಡಿ, ಕೆಲವರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ತಲುಪಿವೆ. ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸುತ್ತಾರೆ ಎನ್ನುವ ಭ್ರಮೆಯಲ್ಲಿದ್ದಾರೆ. ಈ ಗ್ಯಾರಂಟಿಗಳು ವಿಧಾನ ಸಭಾ ಚುನಾವಣೆಗೆ ಮಾತ್ರ ಸೀಮಿತ. ಆದ್ದರಿಂದ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಗ್ಯಾರಂಟಿ ಯೋಜನೆ ನೀಡಿದ್ದಾರೆ. ಇದಕ್ಕೆ ಉತ್ತರ, ಲೋಕಸಭಾ ಚುನಾವಣೆಯಲ್ಲಿ ದೊರೆಯಲಿದೆ ಎಂದರು.
ಬಿಜೆಪಿಯ ಹಿರಿಯ ಮುಖಂಡ ಎಂ.ಬಿ.ಭಾನುಪ್ರಕಾಶ್ ಮಾತನಾಡಿ, ದೇಶದಲ್ಲಿ ಸಾಧನೆ ಮತ್ತು ಪೊಳ್ಳು ಭರವಸೆಗಳ ನಡುವೆ ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂದು ಹೇಳಿದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ಮೋಹನ್ ರೆಡ್ಡಿ ಮಾತನಾಡಿ, ಬಿಜೆಪಿಯ ದೇಶ ಭಕ್ತ ಕಾರ್ಯಕರ್ತರಿಗೆ ಸವಾಲು ಎದುರಿಸಬೇಕಿದೆ. ಆದ್ದರಿಂದ, ಎಲ್ಲಾ ಬೂತ್ ಮಟ್ಟ ಹಾಗೂ ವಾರ್ಡ್ ಮಟ್ಟದಲ್ಲಿ ಚುನಾವಣೆ ಕಾರ್ಯ ಪ್ರಚಾರ ಚುರುಕುಗೊಳಿಸಬೇಕಿದೆ ಎಂದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಟಿ.ಡಿ.ಮೇಘರಾಜ್, ಎಸ್.ಎಸ್.ಜ್ಯೋತಿ ಪ್ರಕಾಶ್, ಡಾ.ಧನಂಜಯ್ ಸರ್ಜಿ, ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನ ಕುಮಾರ್, ಕೆ.ಜಿ.ಕುಮಾರ್ ಸ್ವಾಮಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕಡಿದಾಳ್ ಗೋಪಾಲ್, ದೀಪಕ್ ಸಿಂಗ್, ಶಿವರಾಜ್, ಹರಿಕೃಷ್ಣ, ಮಂಜುನಾಥ್ ನವುಲೆ, ದೀಪಕ್ ಸಿಂಗ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.