ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನದಟ್ಟಣೆ ಪ್ರದೇಶಗಳಲ್ಲಿ ಶೌಚಾಲಯಗಳ ಕೊರತೆ

ಬಸ್‌ ತಂಗುದಾಣದಲ್ಲಿ ಮೂತ್ರ ವಿಸರ್ಜನೆಗೆ ದುಬಾರಿ ಶುಲ್ಕ
Last Updated 20 ಜನವರಿ 2023, 5:23 IST
ಅಕ್ಷರ ಗಾತ್ರ

ಆನವಟ್ಟಿ: ಇಲ್ಲಿ ಪಟ್ಟಣ ಪಂಚಾಯಿತಿ ಇದ್ದರೂ ಮೂಲಸೌಕರ್ಯ ಕೊರತೆ ಕಾಡುತ್ತಿದೆ. ಬಸ್ ತಂಗುದಾಣ ಬಿಟ್ಟರೆ ಜನದಟ್ಟಣೆ ಇರುವಲ್ಲಿ ಸಾರ್ವಜನಿಕ ಶೌಚಾಲಯಗಳು ಇಲ್ಲ.

ಆನವಟ್ಟಿಯ ಸಮುದಾಯ ಆಸ್ಪತ್ರೆ ವೃತ್ತ, ಸಂತೆ ಮಾರುಕಟ್ಟೆ, ಬಾನಿಕಟ್ಟೆ ಚೌಡಮ್ಮ ವೃತ್ತ, ಪೊಲೀಸ್‌ ಠಾಣೆ ವೃತ್ತಗಳಲ್ಲಿ ಸುಲಭ ಶೌಚಾಲಗಳು ಇಲ್ಲದೇ ನಿತ್ಯ ಹಳ್ಳಿಯಿಂದ ಪಟ್ಟಣಕ್ಕೆ ಬರುವ ಸಾವಿರಾರು ಜನರು ಪರದಾಡುವಂತಾಗಿದೆ.

ಆನವಟ್ಟಿಯ ಬಸ್ ತಂಗುದಾಣದಲ್ಲಿ ಶೌಚಾಲಯವಿದೆ. ನಿತ್ಯ ಸಾವಿರಾರು ವಿದ್ಯಾರ್ಥಿ–ವಿದ್ಯಾರ್ಥಿನಿಯರು ಬಸ್‌ ನಿಲ್ದಾಣದ ಮೂಲಕ ಓಡಾಡುತ್ತಾರೆ. ಆದರೆ, ಇಲ್ಲಿಯ ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೆ ₹ 5, ಮಲ ವಿಸರ್ಜನೆಗೆ ₹ 10 ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೊರೆಯಾಗಿದೆ.

‘ಕೆಲವು ದಿನಗಳ ಹಿಂದೆ ಪತ್ನಿಯೊಂದಿಗೆ ಊರಿಗೆ ಹೊರಟಿದ್ದೆ. ಬಸ್ ಬರಲು ಎರಡು ಗಂಟೆಗಳ ಸಮಯವಿತ್ತು. ಗರ್ಭವತಿಯಾದ ನನ್ನ ಪತ್ನಿ 2–3 ಬಾರಿ ಮೂತ್ರ ವಿಸರ್ಜನೆಗೆ ಹೋಗಬೇಕಾಯಿತು. ಪ್ರತಿ ಸಲ
₹ 5ರಂತೆ ಶುಲ್ಕ ನೀಡಿದ್ದೇನೆ. ನಿತ್ಯ ಬಸ್ ತಂಗುದಾಣಕ್ಕೆ ಬರುವ ಮಹಿಳೆಯರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಪೊಲೀಸ್ ಠಾಣೆ ಹಾಗೂ ಪಟ್ಟಣ ಪಂಚಾಯಿತಿಗೆ ಈ ಬಗ್ಗೆ ದೂರು ನೀಡಿದೆ. ಯಾವುದೇ ಪ್ರಯೋಜನ ಆಗಲಿಲ್ಲ. ಹಳ್ಳಿಯಿಂದ ಬರುವ ಮಹಿಳೆಯರಿಗೆ ಮುಜುಗರದ ಜೊತೆ ತೀವ್ರ ತೊಂದರೆ ಆಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಪ್ರಯಾಣಿಕ ಹರೀಶ್ ಒತ್ತಾಯಿಸಿದ್ದಾರೆ.

‘ಪ್ರಿಯದರ್ಶಿನಿ ಬಾರ್ ಎದುರು ಇದ್ದ ಸಾರ್ವಜನಿಕ ಶೌಚಾಲಯವನ್ನು ಪ್ರಭಾವಿ ವ್ಯಕ್ತಿ ತನ್ನ ಅನುಕೂಲಕ್ಕಾಗಿ ಒಡೆಸಿ ಹಾಕಿದ್ದಾರೆ. ಇದನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸುತ್ತಲೂ 50ಕ್ಕೂ ಹೆಚ್ಚು ಅಂಗಡಿಗಳು ಇದ್ದು, ಅಂಗಡಿ ಮಾಲೀಕರು, ಗ್ರಾಹಕರಿಗೂ ಶೌಚಾಲಯಕ್ಕೆ ಹೋಗಲು ಅವಕಾಶವಿಲ್ಲದೇ ಕಷ್ಟಪಡಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಹೊಸ ಶೌಚಾಲಯ ನಿರ್ಮಾಣ ಮಾಡಿಕೊಡಬೇಕು’ ಎಂದು ಬಟ್ಟೆ ಅಂಗಡಿ ಮಾಲೀಕ ಪ್ರದೀಪ್ ಮನವಿ ಮಾಡಿದ್ದಾರೆ.

ಶನಿವಾರ ಸಂತೆಗೆಂದು ಸಾವಿರಾರು ಜನರು ಹಳ್ಳಿಗಳಿಂದ ಆನವಟ್ಟಿಯ ಸಂತೆಗೆ ಬರುತ್ತಾರೆ. ಬರುವ ಗ್ರಾಹಕರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಪಂಚಾಯಿತಿಯಿಂದ ಒಂದು ಶೌಚಾಲಯ ಕಟ್ಟಿಸಿ ವರ್ಷಗಳೇ ಕಳೆದರೂ ಜನರ ಬಳಕೆಗೆ ನೀಡದೇ ಬೀಗ ಹಾಕಲಾಗಿದೆ.

ಶೃಂಗಾರ ವಸ್ತ್ರ ಭಂಡಾರದ ಹಿಂದೆ, ಸಂತೆ ಮಾರುಕಟ್ಟೆಗೆ ಹೋಗುವ ಮಾರ್ಗದಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಪಟ್ಟಣ ಪಂಚಾಯಿತಿ ಹೊಸದಾಗಿ ನಿರ್ಮಾಣ ಮಾಡಿ ಹಲವು ತಿಂಗಳು ಕಳೆದರೂ ಸಾರ್ವಜನಿಕರ ಬಳಕೆಗೆ ನೀಡಿಲ್ಲ. ಅಲ್ಲಿ ಜನರು ತ್ಯಾಜ್ಯ ಸುರಿಯುತ್ತಿದ್ದು ಶೌಚಾಲಯ ಹಾಳಾಗುತ್ತಿದೆ. ಕೂಡಲೇ ಅಧಿಕಾರಿಗಳು ಜನರ ಬಳಕೆಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಸುರೇಶ್ ಮಸಾಲ್ತಿ ಒತ್ತಾಯಿಸಿದ್ದಾರೆ.

ಈಚೆಗೆ ಪಟ್ಟಣ ಪಂಚಾಯಿತಿಯು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಬಹಿರ್ದೆಸೆ ಮಾಡಿದರೆ ದಂಡ ವಿಧಿಸುವುದಾಗಿ ಪ್ರಕಟಣೆ ಹೊರಡಿಸಿದೆ. ಆದರೆ, ಈ ಪ್ರಕಟಣೆ ಮಾಡುವ ಮೊದಲು ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸುಲಭ ಶೌಚಾಲಯ ನಿರ್ಮಾಣ ಮಾಡಿ, ಅವುಗಳನ್ನು ಸಾರ್ವಜನಿಕರ ಬಳಕೆಗೆ ನೀಡಿದ ನಂತರ ಪ್ರಕಟಣೆ ಹೊರಡಿಸಿದ್ದರೆ ಹೆಚ್ಚು ಅರ್ಥ ಬರುತ್ತಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

.............

ಸಂತೆ ಮಾರುಕಟ್ಟೆ ಶೌಚಾಲಯ ಹಾಗೂ ಶೃಂಗಾರ ಬಟ್ಟೆ ಅಂಗಡಿಯ ಹಿಂದೆ ಇರುವ ಶೌಚಾಲಯವನ್ನು ಅದಷ್ಟು ಬೇಗ ಸಾರ್ವಜನಿಕರ ಬಳಕೆಗೆ ನೀಡಲು ಕ್ರಮ ಕೈಗೊಳ್ಳುತ್ತೇವೆ.

ರಮೇಶ್, ಮುಖ್ಯಾಧಿಕಾರಿ, ಆನವಟ್ಟಿ ಪಟ್ಟಣ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT