ಶಿವಮೊಗ್ಗ: ಇಂದಿರಾ ಆವಾಸ್ ಯೋಜನೆ ಫಲಾನುಭವಿಗಳಿಗೆ ಮನೆ ಹಂಚಿಕೆಗೆ ಕುಟುಂಬ ಸಮೀಕ್ಷೆ ಅಗತ್ಯ ಎಂಬ ಸರ್ಕಾರದ ಕಾನೂನು ಅವೈಜ್ಞಾನಿಕವಾಗಿದ್ದು, ಈ ಕಾನೂನು ಸಡಿಲಗೊಳಿಸಬೇಕು ಎಂದು ತಾಲ್ಲೂಕಿನ ಹೊಳಲೂರು ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಮಾಜಿ ಪ್ರಧಾನ ಕೆ.ಜಿ. ನಿಂಗಪ್ಪ ವಸತಿ ಸಚಿವ ವಿ. ಸೋಮಣ್ಣ ಅವರನ್ನು ಆಗ್ರಹಿಸಿದ್ದಾರೆ.
2011-12ನೇ ಸಾಲಿನ ಇಂದಿರಾ ಆವಾಜ್ ಯೋಜನೆ ಫಲಾನುಭವಿಗಳಿಗೆ ಹಂಚಿಕೆ ಮಾಡಲು 10 ವರ್ಷದ ಹಿಂದೆ ಕುಟುಂಬ ಸಮೀಕ್ಷೆ ಆಧಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ಅಧಿಕಾರಿವರ್ಗದವರು ಗ್ರಾಮ ಪಂಚಾಯ್ತಿಗಳಿಗೆ ಆದೇಶ ನೀಡಿದ್ದಾರೆ.
ಸದರಿ ಯೋಜನೆಗೆ ಒಳಪಡುವ ವ್ಯಕ್ತಿಗೆ ನಿವೇಶನ ಇಲ್ಲದಿರುವ ಬಗ್ಗೆ ಹಾಗೂ ವರಮಾನದ ಸರ್ಟಿಫೀಕೆಟ್ ಬಗ್ಗೆ ತಹಶೀಲ್ದಾರ್ ಅವರಿದ ದೃಢೀಕರಣ ಪತ್ರ ಹಾಜರುಪಡಿಸಿದರೆ ಸಾಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕುಟುಂಬಗಳು ಬೇರೆಯಾಗಿ, ಮನೆ ಕಟ್ಟಿಕೊಳ್ಳದಂತಹ ಪರಿಸ್ಥಿತಿಗಳು ಇವೆ. ಹಾಗಾಗಿ, ಕುಟುಂಬ ಸಮೀಕ್ಷೆ ಎನ್ನುವುದು ಅವೈಜ್ಞಾನಿಕವಾಗಿದ್ದು, ಬಡವರಿಗೆ ತೊಂದರೆಯಾಗುತ್ತದೆ ಎಂದ ಅವರು, ಒಂದು ವೇಳೆ ಗ್ರಾಮ ಪಂಚಾಯ್ತಿ ಯೋಗ್ಯರಲ್ಲದವರಿಗೆ ಮನೆ ಹಂಚಿಕೆ ಮಾಡಿದರೆ ಅಂತಹ ಗ್ರಾಮ ಪಂಚಾಯ್ತಿಯ ಸದಸ್ಯರ ಸದಸ್ಯತ್ವವನ್ನು ಸರ್ಕಾರ ಬೇಕಾದರೆ ರದ್ದುಗೊಳಿಸಲಿ; ಅಥವಾ ಶಿಕ್ಷೆ ವಿಧಿಸಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.