ಇದು ಹೆಸರಿಗೆ ಮಾತ್ರ ಸಾರ್ವಜನಿಕ ಗ್ರಾಮೀಣ ಗ್ರಂಥಾಲಯ. ಆದರೆ, ಕುಳಿತು ಓದಲು ಆಗದಷ್ಟು ಗಿಡಗಂಟೆ, ಕಸದರಾಶಿ, ಜತೆ ಮಲಮೂತ್ರ ವಿಸರ್ಜನೆಯನ್ನು ಕಟ್ಟಡದ ಸುತ್ತಮುತ್ತ ಮಾಡುವುದರಿಂದ ಸೊಳ್ಳೆಗಳ ಕಾಟದ ಜತೆ ಗಬ್ಬು ವಾಸನೆಯಿಂದ ಕೂಡಿದೆ.
ಪಟ್ಟಣದ ಈ ಗ್ರಂಥಾಲಯ ಕಟ್ಟಡವನ್ನು ರಾಜಾರಾಂ ಮೋಹನರಾಯ್ ಗ್ರಂಥಾಲಯ ಪ್ರತಿಷ್ಠಾನದ ನೆರವಿನಲ್ಲಿ 1994-95ರಲ್ಲಿ ಲಕ್ಷಾಂತರ ಹಣ ವ್ಯಯಮಾಡಿ, ಕಟ್ಟಿದ ಈ ಕಟ್ಟಡಕ್ಕೆ ಶೌಚಾಲಯ ಇಲ್ಲದೇ ಓದಲು ಬರೆಯಲು ಆಗದಷ್ಟು ಗಬ್ಬು ವಾಸನೆಯಿಂದ ಗ್ರಂಥಾಲಯ ಕಟ್ಟಡ ಕೂಡಿದೆ.
ಸರ್ಕಾರ `ಊರಿಗೊಂದು ದೇವಾಲಯ; ಮನೆಗೊಂದು ಶೌಚಾಲಯ~ ಘೋಷಣೆ ಮಾಡಿದೆ. ಆದರೆ, ಸರಿಯಾದ ಅನುಷ್ಠಾನ ಆಗದಿರುವುದಕ್ಕೆ ಈ ಗ್ರಾಮೀಣಾ ಗ್ರಂಥಾಲಯವೇ ಸಾಕ್ಷಿ.
ಹಿರಿಯ ಸಾಹಿತಿ ದಿ. ಬೀಚಿ ಅವರು, ಜಾತಿ ಮತಗಳ ಭೇದವಿಲ್ಲದೇ, ಲಿಂಗ ತಾರತಮ್ಯ ಮತ್ತು ಭಾಷೆಗಳ ತಂಟೆಗಳಿಗೆ ಹೊರತಾಗಿ ಪ್ರತಿಯೊಬ್ಬ ವ್ಯಕ್ತಿ ಒಪ್ಪಬಹುದಾದ ಏಕೈಕ ಆಲಯ ಎಂದರೇ ಆದೇ ಶೌಚಾಲಯ ಎಂದಿದ್ದಾರೆ. ಇಂತಹ ಒಂದು ಸಾರ್ವಜನಿಕ ಗ್ರಂಥಾಲಯಕ್ಕೆ ಶೌಚಾಲಯ ಇಲ್ಲದಿರುವುದು ದುರ್ದೈವದ ಸಂಗತಿ ಎಂದು ಗ್ರಾಮದ ಹಾರ್ನಳ್ಳಿ ಗಜೆಂದ್ರಪ್ಪ ಅಸಮಧಾನ ವ್ಯಕ್ತಪಡಿಸುತ್ತಾರೆ.
ಈ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗುವ ರಸ್ತೆಯಲ್ಲಿ ಡಾ.ಅಂಬೇಡ್ಕರ್ ಭವನ, ಗೃಹ ರಕ್ಷಕ ದಳ, ಸ.ಪ.ಪೂ. ಕಾಲೇಜು, ಸರ್ಕಾರಿ ಪೌಢಶಾಲೆ, ವಿದ್ಯಾನಗರ ಮತ್ತು ಕರಿಯಮ್ಮ ದೇವಸ್ಥಾನಕ್ಕೆ, ಹೋಗುವ ರಸ್ತೆಯಲ್ಲಿದ್ದು, ನೃಪತುಂಗ ವೃತ್ತಕ್ಕೆ ಹೊಂದಿಕೊಂಡಿದೆ. ಶಾಲಾ-ಕಾಲೇಜಿನ ಮೈದಾನದಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳು ನಡೆಯುತ್ತಿದ್ದು, ದಾರಿಯಲ್ಲಿ ಹೋಗುವವರಿಗೆ ಮೂತ್ರವಿಸರ್ಜನೆ ಮಾಡಲು ಹೇಳಿಮಾಡಿಸಿದ ಸ್ಥಳದಂತಿದೆ.
ಈ ವೃತ್ತದಲ್ಲಿ ಜಿಲ್ಲಾ ಪಂಚಾಯ್ತಿನಿಂದ `ಸ್ವಚ್ಛಗ್ರಾಮ~ ಯೋಜನೆ ಅಡಿ ಸಮಾರು ಎರಡು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶೌಚಾಲಯ ಮೂಲಸೌಕರ್ಯ ಇಲ್ಲದೇ ನಿರುಪಯುಕ್ತ ಆಗಿದೆ. ಆದೇ ರೀತಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸಾಮಾನ್ಯ ಪರೀಕ್ಷೆ ಘಟಕದ ನಿರ್ಮಿತಿ ಕೇಂದ್ರದ ವತಿಯಿಂದ ್ಙ 1.85 ಲಕ್ಷ ಅನುದಾನದಲ್ಲಿ ನಿರ್ಮಿಸಿದ ಶೌಚಾಲಯ ಉಪಯೋಗಿಸದೇ ಬೀಗ ಬಿದ್ದಿದೆ.
ಲಕ್ಷಾಂತರ ಹಣ ವ್ಯಯಮಾಡಿ ಕಟ್ಟಿದ ಶೌಚಾಲಯಗಳು ಒಂದೆಡೆ ನಿರುಪಯುಕ್ತವಾದರೆ, ಇನ್ನೊಂದೆಡೆ ಶೌಚಾಲಯವಿಲ್ಲದೇ ಜನ ಪರಿತಪಿಸುವಂತಾಗಿದೆ. ಇದರ ಮಧ್ಯ ಸಾರ್ವಜನಿಕ ಸಮುದಾಯ ಸಂಕೀರ್ಣದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಶೌಚಾಲಯದ ಕಾಮಗಾರಿ ತಕ್ಷಣ ನಡೆದು ಸಾರ್ವಜನಿಕರ ಉಪಯೋಗಕ್ಕೆ ಬರುವಂತಾಗಲಿ ಎಂದು ಗ್ರಾಮದ ಯುವ ಮುಖಂಡ ಕನ್ಯಾಲಾಲ್ ಒತ್ತಾಯಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಸೇರಿದಂತೆ ಕಡ್ಡಾಯವಾಗಿ ಶೌಚಾಲಯಗಳು ಇರಬೇಕು ಎಂದು ಆದೇಶ ಇದ್ದು, ಅದಕ್ಕಾಗಿ ಲಕ್ಷಾಂತರ ಅನುದಾನ ನೀಡುತ್ತಿದ್ದರೂ, ಸಹ ಸಂಬಂಧಿಸಿದ ಇಲಾಖೆ ಗಮನ ಹರಿಸದಿರುವುದು ಸೋಜಿಗದ ಸಂಗತಿ.
ಇನ್ನಾದರೂ ಸಂಬಂಧಿಸಿದ ಇಲಾಖೆ ಸಾರ್ವಜನಿಕರ ಹಿತದೃಷ್ಟಿಯಿಂದ ಮೂಲಸೌಲಭ್ಯಗಳಾದ ಶೌಚಾಲಯದ ಜತೆ ನೀರು ಮತ್ತು ಸ್ವಚ್ಛತೆ ಕಾಪಾಡುವ ರೀತಿಯಲ್ಲಿ ಸಾರ್ವಜನಿಕರಿಗೆ ಮತ್ತು ಓದುಗರ ಉಪಯೋಗಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.