ಶಿವಮೊಗ್ಗ: ‘ಕುವೆಂಪು ಅವರ ಮಂತ್ರ ಮಾಂಗಲ್ಯದಡಿ ವಿವಾಹಗಳು ಆಗಾಗ ನಡೆದಲ್ಲಿ ಕುವೆಂಪು ಅವರು ನಮ್ಮ ಮಧ್ಯೆ ಎಂದಿಗೂ ಜೀವಂತವಾಗಿರುತ್ತಾರೆ’ ಎಂದು ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ಮಟ್ಟು ಹೇಳಿದರು.
ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಭಾನುವಾರ ಕುವೆಂಪು ಅವರ ಮಂತ್ರ ಮಾಂಗಲ್ಯದಡಿ ನಡೆದ ಟಿ.ಪಿ. ಭಾಸ್ಕರ ಹಾಗೂ ಟಿ.ಚೈತ್ರಾ ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದುಂದುವೆಚ್ಚದ, ಆಡಂಬರದ ಹಾಗೂ ಪ್ರತಿಷ್ಠೆಯ ಮದುವೆಗಳು ನಡೆಯುವ ಬದಲಾಗಿ, ಸರಳ ವಿವಾಹಗಳನ್ನು ಪ್ರೋತ್ಸಾಹಿಸಬೇಕಿದೆ. ಶ್ರೀಮಂತಿಕೆ ತೋರ್ಪಡಿಸುವ ಮದುವೆಗಳಿಗಿಂತ ಸರಳ ಮದುವೆ ಆಯೋಜಿಸುವ ಮೂಲಕ ವಿವಾಹಕ್ಕಿರುವ ಪ್ರಾಮುಖ್ಯತೆ ತಿಳಿಸಿಕೊಡಬೇಕಿದೆ ಎಂದರು.
ಮದುವೆಯಾಗುವ ನವದಂಪತಿ ಪರಸ್ಪರ ಅನ್ಯೋನತೆಯಿಂದ ಬಾಳ್ವೆ ನಡೆಸಿಕೊಂಡು ಮುನ್ನಡೆಯಬೇಕು. ದ್ವೇಷದಿಂದ ಏನನ್ನೂ ಸಾಧಿಸಲಾಗುವು
ದಿಲ್ಲ. ಪ್ರೀತಿಯಿಂದ ಇಡೀ ಜಗತ್ತನ್ನೇ ಗೆಲ್ಲಬಹುದು. ಒಡೆದ ಮನಸ್ಸುಗಳನ್ನು, ಸಮಾಜವನ್ನು ಒಂದುಗೂಡಿಸುವ ಶಕ್ತಿ ಪ್ರೀತಿಗಿದೆ. ಪತಿ, ಪತ್ನಿ ನಡುವೆ ಪ್ರೀತಿ
ಯಿದ್ದರೆ ಬದುಕು ಸಾರ್ಥಕ ಎಂದರು.
ದಂಪತಿ ಅನ್ಯೋನತೆಯಿಂದ ಬಾಳಬಂಡಿ ನಡೆಸಬೇಕು. ಒಬ್ಬರ ಅಭಿಪ್ರಾಯಗಳನ್ನು, ಇನ್ನೊಬ್ಬರು ಗೌರವಿಸಬೇಕು. ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಪ್ರೀತಿಸಿ ಮದುವೆಯಾದವರಲ್ಲಿ, ನಿರೀಕ್ಷೆಗಳು ಸಾಕಷ್ಟಿರುತ್ತವೆ. ಜೀವನದ ಜವಾಬ್ದಾರಿಗಳು ಹೆಗಲೇರಿದಾಗ ಪ್ರೀತಿ ಕಡಿಮೆಯಾಗದಂತೆ ದಂಪತಿ ಪರಸ್ಪರ ಎಚ್ಚರ ವಹಿಸಬೇಕು. ತಂದೆ, ತಾಯಿಯರನ್ನು ಹಾಗೂ ಬಂಧುಮಿತ್ರರನ್ನು ಪ್ರೀತಿಸುವಂತೆ ದಂಪತಿಯಲ್ಲಿ ಸದಾ ಪ್ರೀತಿ ಮನೆ ಮಾಡಿರಬೇಕು ಎಂದು ಸಲಹೆ ನೀಡಿದರು. ಸಾಹಿತಿ ಬಾನುಮುಸ್ತಾಕ್, ಸಂಸ್ಕೃತಿ ಚಿಂತಕ ಡಾ.ಮೇಟಿ ಮಲ್ಲಿಕಾರ್ಜುನ, ರಂಗನಿರ್ದೇಶಕ ಕೊಟ್ರಪ್ಪ ಜಿ.ಹಿರೇಮಾಗಡಿ ಇದ್ದರು.