ಸೊರಬ: ‘ಯಾವುದೇ ಕ್ಷೇತ್ರದಲ್ಲಿ ವ್ಯಕ್ತಿ ಗುಲಾಮಗಿರಿಗೆ ಒಳಗಾಗದೇ ಕರ್ತವ್ಯದಲ್ಲಿ ತೊಡಗಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಸಾಧ್ಯ’ ಎಂದು ಬಂಕಾಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಚ್.ಬಿ.ಪಂಚಾಕ್ಷರಯ್ಯ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದಿಂದ ಶನಿವಾರ ಏರ್ಪಡಿಸಿದ್ದ ‘ಜ್ಞಾನ ಸಂಭ್ರಮ’ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು, ‘ಉದ್ಯೋಗ ಕೌಶಲ ಹಾಗೂ ಸ್ವ ಉದ್ಯೋಗ ಅವಕಾಶಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದರು.
‘ಯುವಜನತೆ ಕೀಳರಿಮೆ ತೊರೆದು ಸ್ವ ಉದ್ಯೋಗದತ್ತ ಮುಂದಾದಾಗ ಮಾತ್ರ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಸ್ವ ಉದ್ಯೋಗಗಳನ್ನು ಕೈಗೊಳ್ಳುವುದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಜೊತೆಗೆ ಗುಲಾಮಗಿರಿಯನ್ನು ತೊಡೆದುಹಾಕಲು ಇದು ಅನುಕೂಲವಾಗಲಿದೆ’ ಎಂದು ಹೇಳಿದರು.
‘ಸರ್ಕಾರದ ಯೋಜನೆಗಳಿಗೆ ಜನ ಸಾಮಾನ್ಯರ ಕಂದಾಯ ಹಣವೇ ಮುಖ್ಯ ಪಾತ್ರ ವಹಿಸುತ್ತದೆ. ಬಡತನದಲ್ಲಿರುವ ಕೃಷಿಕರ ಹಾಗೂ ನಿರ್ಗತಿಕರ ಸಾಲ ಮನ್ನಾ ಮಾಡಬೇಕೇ ಹೊರತು, ಸರ್ಕಾರ ಯಾವುದೇ ಒತ್ತಡಕ್ಕೆ ಒಳಗಾಗದೇ ಬಂಡವಾಳಶಾಹಿ ಕೃಷಿಕರ ಹಾಗೂ ಉದ್ಯಮಿಗಳ ಸಾಲ ಮನ್ನಾ ಮಾಡ
ಬಾರದು’ ಎಂದರು.
‘ಅಭಿವೃದ್ಧಿ ಎಂಬುದು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ಪರಿಪೂರ್ಣ ಏಳಿಗೆ ಬಯಸುತ್ತದೆಯೇ ಹೊರತು, ರಸ್ತೆ, ಕಟ್ಟಡಗಳ ನಿರ್ಮಾಣವನ್ನಲ್ಲ’ ಎಂದು ಅವರು ಹೇಳಿದರು. ವಿವಿಧ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪ್ರಾಂಶುಪಾಲ ಮಹಮದ್ ಅಲಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಮೈತ್ರಿ ಪಾರ್ಥಿಸಿದರು. ವಿನಾಯಕ ಮತ್ತು ಸಂಗೀತಾ ಸ್ವಾಗತಿಸಿದರು. ಮೇಘನಾ ಮತ್ತು ಭರತ್ ವಂದಿಸಿದರು. ಕಾತ್ಯಾಯಿನಿ ಮತ್ತು ಕಾರ್ತಿಕ್ ನಿರೂಪಿಸಿದರು.
ಸಮಾರಂಭದಲ್ಲಿ ಉಪನ್ಯಾಸಕರಾದ ಡಾ. ಶ್ಯಾಮಸುಂದರ್, ಎಂ.ಎಚ್. ರಾಜಪ್ಪ, ಸಂತೋಷ್, ಶಂಕರ್, ವಿಘ್ನೇಶ್, ರುದ್ರಪ್ಪ, ಸಂತೋಷ್, ಶ್ರುತಿ, ಅಮೃತಾ, ಅಶ್ವಿನಿ, ವಿಭಾ ಹಾಜರಿದ್ದರು.