ಕನಕಪುರ: ’ಶಿಕ್ಷಣದಿಂದ ವಂಚಿತರು, ಬಡತನದಲ್ಲಿರುವವರನ್ನು ಗುರುತಿಸಿ ಹೊಲಿಗೆ, ಕಂಪ್ಯೂಟರ್ ತರಬೇತಿ ನೀಡುವ ಮೂಲಕ ಅವರ ಜೀವನ ಕಟ್ಟಿಕೊಳ್ಳಲು ಸಹಕರಿಸುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ’ ಎಂದು ಅಪ್ಸ ಸಂಸ್ಥೆಯ ನಿರ್ದೇಶಕಿ ಸುಮಾ ದೇವರಾಜು ಹೇಳಿದರು.
ಮಲ್ಲಾಪುರ ಗ್ರಾಮದಲ್ಲಿ ಉಚಿತ ಕಂಪ್ಯೂಟರ್ ಮತ್ತು ಟೈಲರಿಂಗ್ ತರಬೇತಿ ಪಡೆದವರಿಗೆ ‘ಪ್ರಮಾಣ ಪತ್ರ, ಬ್ಯಾಗ್ ಮತ್ತು ಕಲಿಕಾ ಸಾಮಗ್ರಿ ವಿತರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾಜದಲ್ಲಿ ಯಾರೂ ಆಶಕ್ತರಲ್ಲ. ಸರಿಯಾದ ಅವಕಾಶ ಸಿಗದೆ ಹಿಂದುಳಿದಿರುತ್ತಾರೆ. ಅಂತಹವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ’ ಎಂದರು.
‘ಸಂಸ್ಥೆಯು ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಯಾರೂ ಹತಾಶ ಮನೋಭಾವ ತಾಳಬಾರದು. ಎಂತಹ ಸಮಸ್ಯೆ ಬಂದರೂ ಧೈರ್ಯವಾಗಿ ಎದುರಿಸಬೇಕು‘ ಎಂದು ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕ ಲಕ್ಷ್ಮೀಪತಿ ಮಾತನಾಡಿ, ‘ಬಡ ಹೆಣ್ಣು ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತ ತರಬೇತಿ ನೀಡಿ ಉದ್ಯೋಗ ಒದಗಿಸಿ, ಅವರ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುವುದೇ ಸಂಸ್ಥೆಯ ಗುರಿ’ ಎಂದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಉದ್ಘಾಟನೆ ನೆರವೇರಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಕೃಷ್ಣಮೂರ್ತಿ,ಸಿ.ರಘು, ದಾಸಯ್ಯ, ಮಹದೇವಯ್ಯ, ಕೆ.ಸಿ.ರಘು, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಕೆ.ಎಸ್.ಭಾಸ್ಕರ್, ಕೋಡಿಹಳ್ಳಿ ಪಂಚಾಯಿತಿ ಅಧ್ಯಕ್ಷ ನಂದೀಶ್, ಎ.ಎಸ್.ಐ. ಗಣೇಶ್, ಶಿಕ್ಷಕ ಪ್ರಭಾಕರ, ಅಪ್ಸ ಸಂಸ್ಥೆಯ ಬಸವರಾಜು, ಸವಿತಾ ಇದ್ದರು.