ತಿಪಟೂರು: ತಾಲ್ಲೂಕಿನ ಮಡೆನೂರು ಗ್ರಾಮ ಲೆಕ್ಕಿಗ ರವಿಶಂಕರ್ ಕಂದಾಯ ಸ್ವತ್ತಿನ ಖಾತೆ ಬದಲಾವಣೆ ಮಾಡಲು ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಮಡೆನೂರು ಗ್ರಾಮದ ಉಮೇಶ್ ಎಂಬುವವರು ತಮ್ಮ ಅಕ್ಕನಿಗಾಗಿ ಕ್ರಯಕ್ಕೆ ಜಮೀನನ್ನು ಖರೀದಿಸಿದ್ದರು. ಖರೀದುದಾರರ ಹೆಸರಿಗೆ ಸ್ವತ್ತನ್ನು ಖಾತೆ ಬದಲಾವಣೆ ಮಾಡಿಕೊಡಲು ರವಿಶಂಕರ್ ₹ 30 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.
ಉಮೇಶ್ ಮೊದಲ ಕಂತಾಗಿ ₹ 5 ಸಾವಿರವನ್ನು ಫೋನ್ ಪೇ ಮುಖಾಂತರ ರವಿಶಂಕರ್ ಖಾತೆಗೆ ವರ್ಗಾವಣೆ ಮಾಡಿದ್ದರು. ಉಳಿದ ₹ 25 ಸಾವಿರ ನೀಡುವ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಉಪಾಧೀಕ್ಷಕ ಉಮಾಶಂಕರ್ ಕಾರ್ಯಾಚರಣೆಯನ್ನು ನಡೆಸಿ ವಶಕ್ಕೆ ಪಡೆದಿದ್ದಾರೆ.