ತುಮಕೂರು: ದೇಶದಲ್ಲಿ ಭ್ರಷ್ಟಾಚಾರವನ್ನು ತೊಲಗಿಸಲು ಎಲ್ಲರೂ ಕೈ ಜೋಡಿಸಬೇಕಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.
ಅನನ್ಯ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ನಲ್ಲಿ ಆಯೋಜಿಸಿದ್ದ ‘ಅನನ್ಯ ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಜನತೆ ರಾಜಕೀಯಕ್ಕೆ ಬಂದು ನಿಸ್ವಾರ್ಥವಾಗಿ ಜನರ ಸೇವೆ ಮಾಡಿದರೆ ಪ್ರಗತಿ ಸಾಧ್ಯ. ನಮ್ಮ ದೇಶದಲ್ಲಿ ಭ್ರಷ್ಟಾಚಾರವು ಎಲ್ಲೆ ಮೀರಿದೆ. ಹಲವಾರು ರಾಜಕಾರಣಿಗಳು ಹಾಗೂ ಅಧಿಕಾರಿಗಳ ದುರಾಸೆಗೆ ಮಿತಿಯೇ ಇಲ್ಲವಾಗಿದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯ ಕುಲಪತಿ ವೈ.ಎಸ್.ಸಿದ್ದೇಗೌಡ, ವಿದ್ಯಾರ್ಥಿಗಳಿಗೆ ಪಠ್ಯಗಳಲ್ಲಿ ಅಷ್ಟೇ ಅಲ್ಲದೆ ಸಮಾಜದ ಹಾಗೂ ಆಗುಹೋಗುಗಳ ಬಗ್ಗೆಯೂ ಅರಿವಿರಬೇಕು. ಪಠ್ಯಕ್ರಮಗಳಲ್ಲಿ ಮೌಲ್ಯಧಾರಿತ ವಿಷಯವನ್ನು ಬೋಧಿಸದೆ ಇರುವುದರಿಂದ ಹಲವಾರು ಅನಾಹುತಗಳು ಉಂಟಾಗುತ್ತಿವೆ ಎಂದರು.
ಅನನ್ಯ ಸಂಸ್ಥೆಯ ಅಧ್ಯಕ್ಷ ಸಿ.ಎ.ಎಸ್.ವಿಶ್ವನಾಥ್, ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯವನ್ನು ಕಳೆದುಕೊಳ್ಳಬಾರದು. ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು. ಆದರ್ಶವನ್ನು ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಂಸ್ಥೆಯ ಟ್ರಸ್ಟಿ ಎಚ್.ಹರೀಶ್, ತುಮಕೂರು ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್, ಭೂಮಿ ಬಳಗದ ಅಧ್ಯಕ್ಷ ಸೋಮಶೇಖರ್ ಇದ್ದರು.