ಪಾವಗಡ: ಈ ಬಾರಿಯ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳೂ ನೀರಾವರಿ ಯೋಜನೆ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿ ಮತಯಾಚಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಲೋಕಸಭೆ ಚುನಾವಣೆ ನೀರಸವೆನಿಸಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳು ರೋಡ್ ಶೋ, ಬೆರಳೆಣಿಕೆ ಪ್ರಚಾರ ಸಭೆ ಮಾಡಿರುವುದನ್ನು ಹೊರತುಪಡಿಸಿ ಬಿರುಸಿನ ಪ್ರಚಾರ ನಡೆಸಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮಾಜಿ ಸಚಿವ ವೆಂಕಟರಮಣಪ್ಪ ನೇತೃತ್ವದಲ್ಲಿ, ಬಿಜೆಪಿ ಅಭ್ಯರ್ಥಿ ಪರ ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ, ಜಿಲ್ಲಾಧ್ಯಕ್ಷ ಆರ್ಸಿ ಅಂಜಿನಪ್ಪ ನೇತೃತ್ವದಲ್ಲಿ ಹೋಬಳಿ ಹಂತದಲ್ಲಿ ಪ್ರಚಾರ ನಡೆಸಲಾಗಿದೆ. ಪಕ್ಷಗಳ ಪ್ರಚಾರ ಪ್ರತಿ ಗ್ರಾಮವನ್ನೂ ತಲುಪಿಲ್ಲ ಎಂಬ ಕೂಗು ಇದೆ.
ತಾಲ್ಲೂಕು ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ. ಹಲವು ದಶಕಗಳಿಂದ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಮಂಜೂರು ಮಾಡಿದ್ದು, ತಾಲ್ಲೂಕನ್ನು ಯೋಜನೆಯ ಪಟ್ಟಿ ವ್ಯಾಪ್ತಿಗೆ ಸೇರಿಸಿರುವ ಬಗ್ಗೆ ಮೂರು ಪಕ್ಷಗಳ ಅಭ್ಯರ್ಥಿಗಳು ಪ್ರಚಾರದಲ್ಲಿ ಹೇಳಿಕೊಂಡಿದ್ದಾರೆ.
ತುಂಗಭದ್ರಾ ಹಿನ್ನೀರನ್ನು ಶುದ್ಧೀಕರಿಸಿ ಪೈಪ್ಲೈನ್ ಮೂಲಕ ತಾಲ್ಲೂಕಿಗೆ ಹರಿಸುವ ಮತ್ತೊಂದು ಯೋಜನೆಯೂ ಚುನಾವಣೆ ವೇಳೆ ಹೆಚ್ಚು ಚರ್ಚೆಯಾಗುತ್ತಿದೆ. ಅಧಿಕಾರಕ್ಕೆ ಬಂದರೆ ಕೆಲವೇ ತಿಂಗಳುಗಳಲ್ಲಿ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಮಾಡಲು ಆದ್ಯತೆ ನೀಡುವುದಾಗಿ ಹೇಳಿಕೊಂಡಿವೆ.
ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಕಾಮಗಾರಿ ಅತ್ಯಂತ ನಿಧಾನವಾಗಿ ನಡೆಯುತ್ತಿದೆ. ಕಾಮಗಾರಿ ಮುಗಿಸಿ ಒಂದು ವರ್ಷದಲ್ಲಿ ತಾಲ್ಲೂಕಿನ ಜನತೆ ರೈಲಿನಲ್ಲಿ ಓಡಾಡುವಂತೆ ಮಾಡುತ್ತೇವೆ. ರೈಲು ಸಂಚಾರ ಆರಂಭಿಸಿದಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಅನುಕೂಲವಾಗುತ್ತದೆ ಎಂದು ಅಭ್ಯರ್ಥಿಗಳು ಜನರಲ್ಲಿ ವಿಶ್ವಾಸ ಮೂಡಿಸಿದ್ದಾರೆ.
ನೀರಾವರಿ ಯೋಜನೆಗಳನ್ನು ಹೊರತುಪಡಿಸಿದರೆ ಸೋಲಾರ್ ಪಾರ್ಕ್ ಪ್ರಚಾರದ ಪ್ರಮುಖ ವಸ್ತು ವಿಷಯವಾಗಿತ್ತು.
ಈವರೆಗೆ ಆಯ್ಕೆಯಾದ ವಿವಿಧ ಪಕ್ಷಗಳ ಸಂಸದರು ತಾಲ್ಲೂಕಿಗೆ ಗಣನೀಯ ಕೊಡುಗೆ ನೀಡಿಲ್ಲ. ಚಳ್ಳಕೆರೆ, ಚಿತ್ರದುರ್ಗ ಸೇರಿದಂತೆ ಕ್ಷೇತ್ರದ ವಿವಿಧೆಡೆ ಉತ್ತಮ ಕೆಲಸಗಳಾಗಿವೆ. ಆದರೆ ತಾಲ್ಲೂಕಿನ ಬಗ್ಗೆ ತಾರತಮ್ಯ ಧೋರಣೆ ತೋರಲಾಗುತ್ತಿದೆ ಎಂಬ ದೂರುಗಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.