ತಿಪಟೂರು: ‘ಅರಣ್ಯ, ಅಮೃತ್ ಮಹಲ್ ಕಾವಲು, ಹುಲ್ಲುಗಾವಲು, ಜೌಗು ಪ್ರದೇಶ, ಕೆರೆ, ಬೆಟ್ಟ– ಗುಡ್ಡಗಳ ಸಂರಕ್ಷಣೆ ನಮ್ಮ ಕರ್ತವ್ಯ’ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜೀವ ವೈವಿಧ್ಯ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ 300ಕ್ಕೂ ಹೆಚ್ಚು ಕೆರೆಗಳಿವೆ. ಒಟ್ಟಾರೆ ವಿಸ್ತೀರ್ಣ 9,000ಕ್ಕೂ ಹೆಚ್ಚಿದೆ. ಅವುಗಳ ಸಂರಕ್ಷಣೆ ಮುಖ್ಯ. ಗ್ರಾಮಗಳಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸಲು ತಾಲ್ಲೂಕು ಆಡಳಿತದೊಂದಿಗೆ ಇತರ ಇಲಾಖೆಗಳ ಕೈಜೋಡಿಸಬೇಕು. ನೈಸರ್ಗಿಕ ತಾಣಗಳನ್ನು ಉಳಿಸುವಲ್ಲಿ ಗ್ರಾಮ ಪಂಚಾಯಿತಿ ಕಾರ್ಯ ಮುಖ್ಯ. ಅಲ್ಲಿನ ಜನಪ್ರತಿನಿಧಿಗಳು ಜೀವ ವೈವಿಧ್ಯವನ್ನು ಸರಂಕ್ಷಿಸಬೇಕು ಎಂದು ಹೇಳಿದರು.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಹಾಗೂ ನಗರಸಭೆಯಲ್ಲಿ ಜೀವ ವೈವಿಧ್ಯ ಜಾಗೃತಿ ಸಭೆಗಳನ್ನು ನೆಡಸಿ ಜೀವ ವೈವಿಧ್ಯ ತಂಡಗಳನ್ನು ಸಕ್ರಿಯಗೊಳಿಸಬೇಕು. ಅಮೃತ್ ಮಹಲ್ ಹುಲ್ಲಗಾವಲುಗಳ ರಕ್ಷಣೆ, ಕಲ್ಪತರು ನಾಡಿನ ಗಂಗಾಪಾಣಿ ಉಳಿಸುವ ಕಾರ್ಯವಾಗಬೇಕು ಎಂದರು.
ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ಕರೆ, ಕಟ್ಟೆಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ನೆಡೆಯುತ್ತಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ. ಪಂಚಾಯಿತಿಗಳ ಪಿಡಿಒಗಳಿಗೆ ಇ-ಸ್ವತ್ವಗಳನ್ನು ಮಾಡುವುದರಲ್ಲಿ ಆಸಕ್ತಿ ಇದ್ದು, ಕೆರೆ ಕಟ್ಟೆಗಳಿಗೆ, ಜೌಗು ಪ್ರದೇಶಗಳಿಗೆ ಭೇಟಿ ನೀಡುವ ಆಸಕ್ತಿ ಹೊಂದಿಲ್ಲ ಎಂದರು.
ಜನಪ್ರತಿನಿಧಿಗಳಿಗೆ ಸಮಾಜವನ್ನು, ಅಧಿಕಾರವನ್ನು ಬರೆದು ಕೊಟ್ಟಿಲ್ಲ. ಸ್ಥಳೀಯವಾಗಿ ಜೀವ ವೈವಿಧ್ಯ, ಪರಿಸರದ ಬಗ್ಗೆ ಕಾಳಜಿಯಿರುವ ವ್ಯಕ್ತಿಗಳನ್ನು ಗ್ರಾಮ ಪಂಚಾಯಿತಿ ಸಮಿತಿಗಳಿಗೆ ಸೇರಿಸಿಕೊಂಡು ಪ್ರಕೃತಿಯನ್ನು ಕಾಪಾಡಬೇಕು ಎಂದರು.
ಸಭೆಯಲ್ಲಿ ತಹಶೀಲ್ದಾರ್ ಚಂದ್ರಶೇಖರ್, ತಾ.ಪಂ. ಕಾರ್ಯನಿರ್ವಹಣಾಧಿಕಾರ ಸುದರ್ಶನ್, ಚಿಕ್ಕನಾಯಕನಹಳ್ಳಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ವಸಂತ್, ವಲಯ ಸಂರಕ್ಷಣಾಧಿಕಾರಿ ನಾಗರಾಜು, ನಗರಸಭೆ ಪೌರಾಯುಕ್ತ ಉಮಾಕಾಂತ್, ಪರಿಸರ ಪ್ರೇಮಿ ಮನೋಹರ್ ಪಟೇಲ್, ಶ್ರೀಕಾಂತ್, ಸಮಿತಿಯ ಸದಸ್ಯರು ಇದ್ದರು