ತುಮಕೂರು: ಬ್ರಿಟಿಷರ ದಾಸ್ಯದ ವಿರುದ್ಧ ಹೋರಾಟ ಮಾಡದೆ, ಅವರಿಗೆ ಮುಚ್ಚಳಿಕೆ ಬರೆದುಕೂಟ್ಟವರು ಪ್ರಸ್ತುತ ಅಧಿಕಾರದಲ್ಲಿ ಇದ್ದಾರೆ ಎಂದು ಪ್ರಗತಿಪರ ಚಿಂತಕ ಸಿ.ಯತಿರಾಜು ವಿಷಾದಿಸಿದರು.
ಗಾಂಧಿನಗರದಲ್ಲಿರುವ ಜನಚಳವಳಿ ಕೇಂದ್ರದ ಬಳಿ ಸಿಪಿಎಂ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವತಂತ್ರ ಭಾರತದಲ್ಲಿ ಸಮಾನತೆಯ ಆಶಯಗಳು ಈಡೇರಿಲ್ಲ. ಉದ್ಯೋಗಗಳು ನಾಶವಾಗುತ್ತಿದೆ. ಆದರೆ ಮಠಗಳು ತಮ್ಮ ಜಾತಿಯವರಿಗಾಗಿ ಮೀಸಲಾತಿ ನೀಡುವಂತೆ ಹೋರಾಟ ನಡೆಸುತ್ತಿವೆ. ರಾಜಕೀಯ ನಾಯಕರು ಸಾರ್ವಜನಿಕವಾಗಿ ಅಸಹ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಿಂತಕ ಕೆ.ದೂರೈರಾಜ್, ‘ದೇಶ ರಾಜಕೀಯ ಅಧಿಕಾರ ಪಡೆದಿದೆ. ಆದರೆ ಆಡಳಿತಗಾರರು ಆರ್ಥಿಕ ಗುಲಾಮಗಿರಿಗೆ ಭಾರತವನ್ನು ಒಡ್ಡಿದ್ದಾರೆ. ಅಸಮಾನತೆ ಸೃಷ್ಟಿಸಲಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಮನೆ ಕೆಲಸಗಾರರ ಸಂಘದ ಮುಖಂಡರಾದ ಅನಸೂಯ, ಎಲ್ಲರನ್ನು ಸಮಾನವಾಗಿ ಕಾಣುತ್ತಿಲ್ಲ ಎಂದರು.
ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ, ರೈತರ ಸಮಸ್ಯೆ ಪರಿಹರಿಸಲು ಸರ್ಕಾರಗಳುವಿಫಲಗೊಂಡಿವೆ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ‘ಎಲ್ಲರಿಗೂ ಆಹಾರ, ಆರೋಗ್ಯ, ಶಿಕ್ಷಣ, ಸೂರು ಕಲ್ಪಿಸಲು ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸಾಧ್ಯವಾಗಿಲ್ಲ’ ಎಂದರು.
ಮುಖಂಡ ಎನ್.ಕೆ.ಸುಬ್ರಮಣ್ಯ, ಅಸಮಾನತೆ ತಡೆಗಟ್ಟಲು ರೈತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನರು ಹೋರಾಟ ನಡೆಸಬೇಕು ಎಂದು ಹೇಳಿದರು.
ಟಿ.ಆರ್.ರೇವಣ್ಣ ಧ್ವಜಾರೋಹಣ ನೆರವೇರಿಸಿದರು. ಮುಖಂಡರಾದ ಬಿ.ಉಮೇಶ್, ಡಿಸಾ ಲೋಕೇಶ್, ಫುಟ್ಪಾತ್ ವ್ಯಾಪಾರಿಗಳ ಸಂಘದ ರವಿ, ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಗೋವಿಂದರಾಜುಇದ್ದರು.