ತುಮಕೂರು: ಬುದ್ಧನ ಅಷ್ಟ ಮಾರ್ಗಗಳನ್ನು ಪಾಲಿಸಿದಾಗ ಮಾತ್ರ ಮನುಷ್ಯನಾಗಲು ಸಾಧ್ಯ ಎಂದು ಬಂತೇಜೀ ಚಾಂದಿಮ ಸ್ವಾಮೀಜಿ ಹೇಳಿದರು.
ನಗರದ ಸಿದ್ಧಾರ್ಥ ನಗರದ ಬುದ್ಧ ವಿಹಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಮ್ಮ ಮಾತು ಅರ್ಥಪೂರ್ಣತೆ ಯಿಂದ ಕೂಡಿರಬೇಕು. ಯುವಕರು ತಮ್ಮ ಬುದ್ಧಿ ಹಾಳು ಮಾಡುವಂತಹ ಮಾದಕ ದ್ರವ್ಯಗಳನ್ನು ಬಳಕೆ ಮಾಡಬಾರದು. ಸುಳ್ಳು ಹೇಳುವುದು, ಮತ್ತೊಬ್ಬರನ್ನು ನಿಂದಿಸುವುದರಲ್ಲಿ ಅರ್ಥವಿಲ್ಲ. ಮನುಷ್ಯನಿಗೆ ಜೀವನದಲ್ಲಿ ತೃಪ್ತಿ ಬಹಳ ಮುಖ್ಯ’ ಎಂದು ಹೇಳಿದರು.
ಬುದ್ಧ ಧರ್ಮದ ವಿಚಾರಕ ನರಸಿಂಗಪ್ಪ, ‘ದೇಹಕ್ಕೂ, ಮನಸ್ಸಿಗೂ ಮತ್ತು ಉಸಿರಾಟಕ್ಕೂ ಸಂಬಂಧವಿದೆ. ಮನಸ್ಸಿನ ಮೇಲೆ ಗಮನವಿಟ್ಟಾಗ ಪ್ರಾಮಾಣಿಕವಾಗಿ ಇರಲು ಸಾಧ್ಯ. ಉಸಿರಾಟ ನಮ್ಮ ದೇಹದಲ್ಲಾಗುವ ವೇದನೆಯನ್ನು ನೀಗುತ್ತದೆ’ ಎಂದರು.
ಸಾಹೇ ಕುಲಪತಿಡಾ.ಬಾಲಕೃಷ್ಣ ಶೆಟ್ಟಿ, ರಿಜಿಸ್ಟ್ರಾರ್ ಎಂ.ಝೆಡ್. ಕುರಿಯನ್, ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ಎಸ್. ರವಿಪ್ರಕಾಶ, ಆಡಳಿತಾಧಿಕಾರಿ ಬಿ. ನಂಜುಂಡಪ್ಪ, ಹರಿಕಥಾ ವಿದ್ವಾಂಸ ಲಕ್ಷ್ಮಣದಾಸ್ ಹಾಜರಿದ್ದರು.