ಹುಲಿಯೂರುದುರ್ಗ: ರಸ್ತೆಯ ಉಬ್ಬು ಗಮನಿಸದೆ ವೇಗವಾಗಿ ಹೋಗುತ್ತಿದ್ದ ಕಾರು ಬುಧವಾರ ಹಳೇವೂರಿನಲ್ಲಿ ಮೇಲಕ್ಕೆ ಜಿಗಿದಾಗ ಒಳಗಿದ್ದವರು ಗಾಯಗೊಂಡರು.
ಹಳೇವೂರಿನ ಹುಲಿಯೂರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚನ್ನಪಟ್ಟಣದ ಒಂದು ಕುಟುಂಬದ ಸದಸ್ಯರು ಯಡಿಯೂರಿನತ್ತ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.
ಕಾರು ಮೇಲಕ್ಕೆ ಜಿಗಿದಾಗ ಕಾರಿನಲ್ಲೆ ಕೆಳಕ್ಕುರುಳಿ ಬಿದ್ದ ಮಗುವಿನತ್ತ ಆತಂಕದಿಂದ ಹಿಂತಿರುಗಿ ನೋಡಿದ ಚಾಲಕ ಸ್ಟೇರಿಂಗ್ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಬ್ರೇಕ್ ಒತ್ತಿ ಕಾರಿನ ವೇಗ ತಗ್ಗಿಸುವ ಬದಲಾಗಿ ಎಕ್ಸಲೇಟರ್ ತುಳಿದು ಅಡ್ಡಾದಿಡ್ಡಿಯಾಗಿ ನುಗ್ಗಿದ ಕಾರು ರಸ್ತೆ ಬದಿಯ ಕಂಬಕ್ಕೆ ಗುದ್ದಿದೆ. ನೆಲಮಟ್ಟದಲ್ಲಿ ತುಂಡಾಗಿರುವ ಕಂಬ ಆರು ಅಡಿಗಳಷ್ಟು ದೂರಕ್ಕೆ ಎಸೆಯಲ್ಪಟ್ಟಿದೆ.
‘ಕಾರ್ನ ಬಂಪರ್ ಮದ್ಯ ಭಾಗಕ್ಕೆ ಕಂಬ ಅಪ್ಪಳಿಸಿರುವುದರಿಂದ ಹೆಚ್ಚಿನ ಅಪಾಯವಾಗುವುದು ತಪ್ಪಿದೆ. ವಿದ್ಯುತ್ ಕಂಬದ ಮೇಲಿನ ಪ್ರದಾನ ವಾಹಕ ತಂತಿ ತುಂಡಾಗಿ ಕಾರಿನ ಮೇಲಾಗಲಿ, ಮನೆಯ ಮೇಲಾಗಲಿ ಬಿದ್ದಿದ್ದರೂ ಹೆಚ್ಚಿನ ಅನಾಹುತವಾಗುತ್ತಿತ್ತು’ ಎಂದು ಪ್ರತ್ಯಕ್ಷದರ್ಶಿ ರಮೇಶ್ ತಿಳಿಸಿದರು.