ಪಾವಗಡ: ತಾಲ್ಲೂಕಿನ ನಿಡಗಲ್ ದುರ್ಗದಲ್ಲಿ ಭಾನುವಾರ ಗಿರಿಜನ ಉತ್ಸವ ಅದ್ದೂರಿಯಾಗಿ ನಡೆಯಿತು.
ನಿಡಗಲ್ ವಾಲ್ಮೀಕಿ ಆಶ್ರಮದ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ ಮಾತನಾಡಿ, ‘ಸಾಂಸ್ಕೃತಿಕ ಕೋಟೆ ನಿಡಗಲ್ನಲ್ಲಿ ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು’ ಎಂದರು.
ವಿವಿಧ ರಾಜ ಮನೆತನಗಳು ನಿಡಗಲ್ ದುರ್ಗದಲ್ಲಿ ಕಲೆ, ಸಂಸ್ಕೃತಿಯನ್ನು ಪೋಷಿಸಿವೆ. ಇಂತಹ ನಿಡಗಲ್ ದುರ್ಗದಲ್ಲಿ ಸಾಂಸ್ಕೃತಿಕ, ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಿ ನೆಲ ಸಂಸ್ಕೃತಿಯನ್ನು ಉಳಿಸಬೇಕಿದೆ ಎಂದರು.
ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಪಾಳೆಗಾರ್ ಲೋಕೇಶ್, ಸರ್ಕಾರದಿಂದ ಕಲಾವಿದರಿಗೆ ಮಾಸಾಶನ ಕೊಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜನಪದ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಗಿರಿಜನ ನಾಯಕ ನೌಕರರ ಕ್ಷೇಮಾಭಿವೃದ್ಧಿ ಅಧ್ಯಕ್ಷ ಎನ್. ಅನಿಲ್ ಕುಮಾರ್, ನಿಡಗಲ್ ದುರ್ಗ ಸಾಧು, ಸಂತರು, ಸಾಧಕರು ಇದ್ದ ಐತಿಹಾಸಿಕ, ಪೌರಾಣಿಕ ಸ್ಥಳ. ಇಂತಹ ಪ್ರದೇಶವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾರ್ಪಡಿಸುವ ಅಗತ್ಯವಿದೆ ಎಂದರು.
ವಾಲ್ಮೀಕಿ ದೇವಸ್ಥಾನ ಸಮಿತಿ ಅಧ್ಯಕ್ಷ ಸೀನಪ್ಪ ಮಾತನಾಡಿದರು.
ವಿವಿಧ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿದವು.
ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿ ಸುರೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ನರಸಿಂಹ, ಅಧ್ಯಕ್ಷೆ ಮಾಳಮ್ಮ, ರಾಚಮಾರನಹಳ್ಳಿ ಅನಿಲ್, ಹೆಲ್ಪ್ ಸೊಸೈಟಿ ಅಧ್ಯಕ್ಷ ಬಲರಾಂ, ಅಂಬಿಕಾ ರಮೇಶ್, ಕಲಾ ತಂಡಗಳು ಉಪಸ್ಥಿತರಿದ್ದರು.