ತುಮಕೂರು: ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹೋಬಳಿ ಸುಗ್ಗನಹಳ್ಳಿಯಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜಯರಾಮಯ್ಯನಿಗೆ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು 7 ವರ್ಷಗಳ ಕಠಿಣ ಶಿಕ್ಷೆ ಮತ್ತು ₹ 20 ಸಾವಿರ ದಂಡ ವಿಧಿಸಿದೆ.
ಮಹಿಳೆ ಸಂಜೆ ತಮ್ಮ ಗದ್ದೆಯಲ್ಲಿ ಇದ್ದಾಗ ಆರೋಪಿಯು ಅತ್ಯಾಚಾರ ನಡೆಸಿದ್ದ. ಕುಣಿಗಲ್ ಸಿಪಿಐ ರಂಜನ್ ಕುಮಾರ್ ಪ್ರಕರಣ ದಾಖಲಿಸಿದ್ದರು. ಎಚ್.ಎನ್.ಧರ್ಮೇಂದ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ದಂಡದ ಹಣವನ್ನು ಸಂತ್ರಸ್ತೆಗೆ ನೀಡುವಂತೆ ನ್ಯಾಯಾಲಯವು ಸೂಚಿಸಿದೆ. ಒಂದು ವೇಳೆ ದಂಡದ ಹಣ ನೀಡದಿದ್ದರೆ ಹೆಚ್ಚುವರಿಯಾಗಿ 1 ವರ್ಷ ಸಾದಾ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶರಾದ ಎಚ್.ಎಸ್.ಮಲ್ಲಿಕಾರ್ಜುನಸ್ವಾಮಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಎಸ್.ರಾಜಣ್ಣ ವಾದ ಮಂಡಿಸಿದ್ದರು.