ತುರುವೇಕೆರೆ: ರೈತರು ಸಕಾಲಕ್ಕೆ ಸಾಲ ಮರು ಪಾವತಿಸುವ ಮೂಲಕ ಸಂಘದ ಏಳಿಗೆಗೆ ಸಹಕರಿಸಬೇಕು ಎಂದು ಪಿಎಸಿಎಸ್ ಅಧ್ಯಕ್ಷ ಅಮ್ಮಸಂದ್ರ ಸಿದ್ದಗಂಗಯ್ಯ ಮನವಿ ಮಾಡಿದರು.
ತಾಲ್ಲೂಕಿನ ದಂಡಿನಶಿವರದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಸಂಘದ ವ್ಯಾಪ್ತಿಯ ನೂರಾರು ರೈತರಿಗೆ ₹ 150 ಲಕ್ಷ ಸಾಲ ನೀಡಲಾಗಿದೆ. ರೈತರು ಸಂಘದಿಂದ ಸಾಲ ಪಡೆದ ಹಣವನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ಸಲಹೆ ನೀಡಿದರು.
ಹಡವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರಹಟ್ಟಿ, ಹೊನ್ನೇನಹಳ್ಳಿ, ಹಡವನಹಳ್ಳಿಯ ಕೆಲವರು ಹಡವನಹಳ್ಳಿ ಭಾಗದಲ್ಲಿ ಹೊಸ ಸಂಘ ಸ್ಥಾಪಿಸಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಪಂಚಾಯಿತಿಗೊಂದು ಸಹಕಾರ ಸಂಘ ಸ್ಥಾಪನೆ ಮಾಡಬೇಕೆಂಬ ನಿಯಮವಿದೆ. ಸಾಧಕ ಬಾಧಕಗಳನ್ನು ಪರಿಶೀಲಿಸಿ ನೂತನ ಸಂಘ ಸ್ಥಾಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಡಿ.ಎಸ್. ಗಂಗಾಧರಗೌಡ ಮಾತನಾಡಿದರು.ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್.ಎಂ. ಪ್ರಕಾಶ್ ಮಹಾಸಭೆಗೆ 2020-21ನೇ ಸಾಲಿನ ಆಡಿಟ್ ವರದಿ ಮಂಡಿಸಿದರು. ₹ 15 ಲಕ್ಷ ನಷ್ಟದ ಹಾದಿಯಲ್ಲಿದ್ದ ಸಂಘವು ₹ 6.5 ಲಕ್ಷ ಆದಾಯದತ್ತ ಮುಖ ಮಾಡಿದೆ ಎಂದು ತಿಳಿಸಿದರು.