ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ನಗರದಲ್ಲಿ ಕುಂಠಿತಗೊಂಡ ಕಟ್ಟಡ ನಿರ್ಮಾಣ

Last Updated 4 ನವೆಂಬರ್ 2021, 8:08 IST
ಅಕ್ಷರ ಗಾತ್ರ

ತುಮಕೂರು: ‘ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದೆ. ಇಂದು ಇದ್ದ ರೇಟು ನಾಳೆ ಇರುವುದಿಲ್ಲ. ನಾಡಿದ್ದು ಮತ್ತಷ್ಟು ಹೆಚ್ಚಳವಾಗಿರುತ್ತದೆ. ಮುಂದೆಏನಾಗುತ್ತದೋ ಎಂದು ಹೇಳುವುದು ಕಷ್ಟಕರ. ಇಂತಹ ಪರಿಸ್ಥಿತಿಯಲ್ಲಿ ಮನೆ ಕಟ್ಟಿಸುವುದಾದರೂ ಹೇಗೆ? ಹಣ ಎಲ್ಲಿಂದ ತರುವುದು? ಎಂಬ ಚಿಂತೆ ಕಾಡುತ್ತಿದೆ. ಮನೆ ನಿರ್ಮಾಣದ ಪ್ರಯತ್ನವನ್ನೇ ನಿಲ್ಲಿಸಿದ್ದೇನೆ. ಮುಂದೆ ನೋಡೋಣ’....

ಇದು ನಗರದ ಮರಳೂರು ದಿಣ್ಣೆಯ ನಾರಾಯಣ ಅವರೊಬ್ಬರ ಸಂಕಟವಲ್ಲ. ಮನೆ ಕಟ್ಟಿಸಲು ಮುಂದಾಗಿದ್ದ ಬಹುತೇಕರ ಸ್ಥಿತಿಯೂ ಇದೇ ಆಗಿದೆ. ಬೆಲೆ ಏರಿಕೆ ಎಂಬ ಭೂತ ಜನರ ಮೇಲೆ ದೊಡ್ಡ ಬರೆಯನ್ನೇ ಎಳೆದಿದೆ. ಪ್ರತಿ ದಿನವೂ ಬರೆ ಎಳೆಯುತ್ತಲೇ ಸಾಗಿದೆ. ಇದರಿಂದಾದ ಗಾಯ ನೋಡಿಕೊಂಡು ಹೇಳಿಕೊಳ್ಳಲು ಆಗದೆ,ಸುಮ್ಮನಿರಲು ಆಗದೆವಿಲಿವಿಲಿ ಒದ್ದಾಡುತ್ತಿದ್ದಾರೆ.

ನಗರದಲ್ಲಿ ಕಾರ್ಮಿಕರ ಉದ್ಯೋಗಕ್ಕೆ ಆಸರೆಯಾಗಿದ್ದ ಕಟ್ಟಡ ನಿರ್ಮಾಣ ಚಟುವಟಿಕೆಗಳು ಬಹುತೇಕ ಕುಂಠಿತಗೊಂಡಿವೆ. ಒಂದು ಅಂದಾಜಿನ ಪ್ರಕಾಶ ಶೇ 60ರಿಂದ 70ರಷ್ಟು ಕೆಲಸಗಳು ಕಡಿಮೆಯಾಗಿವೆ. ಪುಟ್ಟದೊಂದು ಗೂಡಿಗಾಗಿ ಕನಸು ಕಂಡಿದ್ದವರು, ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ.

ಸರ್ಕಾರಿ ಯೋಜನೆಯಲ್ಲಿ ನಡೆಯುತ್ತಿರುವ ರಸ್ತೆ, ನೀರಾವರಿ, ರೈಲ್ವೆ ಸ್ಮಾರ್ಟ್ ಸಿಟಿ ಇತರೆ ಕಾಮಗಾರಿಗಳು ಮುಂದುವರೆದಿವೆ. ರೆಸಾರ್ಟ್, ಅಪಾರ್ಟ್‌ಮೆಂಟ್, ಬಂಗಲೆಯಂತಹ ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡುವ ಹಣವಂತರಿಗೆ ಯಾವುದೇ ಅಡ್ಡಿಯಾಗಿಲ್ಲ. ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಬಳಲುವುದು ಮಾತ್ರ ತಪ್ಪಿಲ್ಲ. ಬಡ ಜನರು ಮನೆ ನಿರ್ಮಾಣಕ್ಕೆ ಕೈ ಹಾಕುತ್ತಿಲ್ಲ.

ಮೇಲ್ಮಧ್ಯಮ ಹಾಗೂ ಸಿರಿವಂತರು ಮಾತ್ರ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದವರು ಬೆಲೆ ಏರಿಕೆಯನ್ನು ಸರಿದೂಗಿಸಲಾಗದೆ ಮನೆ ಕಟ್ಟುವಸಹವಾಸವೇ ಬೇಡ ಎಂದು ಹಿಂದೆ ಸರಿದಿದ್ದಾರೆ. ಹೊಸದಾಗಿ ಕಟ್ಟಿಸಲು ಯಾರು ಮುಂದಾಗುತ್ತಿಲ್ಲ. ಈಗಾಗಲೇ ಆರಂಭಿಸಿದವರು, ಕೋವಿಡ್‌ಗೆ ಮುಂಚೆ ಕಟ್ಟಿಸಲು ಮುಂದಾಗಿದ್ದವರು ಮಾತ್ರ ಪೂರ್ಣಗೊಳಿಸಿದರೆ ಸಾಕು ಎಂಬಂತಹ ಸ್ಥಿತಿಗೆ ತಲುಪಿದ್ದಾರೆ.

ನಿತ್ಯವೂ ಬೆಲೆ ಏರಿಕೆ ಮುಂದುವರಿದಿದ್ದು, ನಿರ್ಮಾಣಕ್ಕೆ ಯೋಜಿಸಿದ್ದ ಬಜೆಟ್‌ಗಿಂತ ಶೇ 30ರಿಂದ 40ರಷ್ಟು ಹೆಚ್ಚಿಗೆ ಹಣ ಬೇಕಾಗಿದೆ. ಮದುವೆ ಮಾಡಿನೋಡು, ಮನೆ ಕಟ್ಟಿನೋಡು ಎಂಬ ಗಾದೆ ಮಾತಿನಂತೆ ಮೊದಲೇ ಕೂಡಿಟ್ಟು, ಉಳಿತಾಯ ಮಾಡಿದ್ದ, ಸಾಲ ತಂದ ಹಣವನ್ನೆಲ್ಲ ವ್ಯಯಿಸಿದ್ದಾರೆ. ಇಷ್ಟು ಮೊತ್ತದಲ್ಲಿ ಪೂರ್ಣಗೊಳಿಸಬಹುದು ಎಂದು ಅಂದಾಜು ಮಾಡಿರುತ್ತಾರೆ. ಈಗ ಮತ್ತಷ್ಟು ಹೆಚ್ಚಿಗೆ ಹಣ ಹೊಂದಿಸ
ಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಅರ್ಧಕ್ಕೆ ನಿಲ್ಲಿಸಲಾಗದೆ, ಪೂರ್ಣಗೊಳಿಸಲು ಸಾಧ್ಯವಾಗದೆ ಅಡಕತ್ತರಿಗೆ ಸಿಲುಕಿದ್ದಾರೆ.

ಒಂದೊಂದು ರೂಪಾಯಿಯನ್ನೂ ಸೇರಿಸಿ, ಮತ್ತಷ್ಟು ಸಾಲಮಾಡಿ ಮನೆ ನಿರ್ಮಾಣ ಕೆಲಸ ಪೂರ್ಣಗೊಳಿಸಬೇಕಾಗಿದೆ. ಕೆಲಸ ಅರ್ಧದಲ್ಲಿ ಇರುವುದರಿಂದ ಕಷ್ಟವೋ,ಸುಖವೋ ಮುಗಿಸಬೇಕಿದೆ. ಕೊನೆಗೆ ಸಾಲ ಮಾಡುವುದು ಬಿಟ್ಟರೆ ಬೇರೆ ದಾರಿ ಕಾಣುತ್ತಿಲ್ಲ. ಸಾಲದ ಹೊರೆ ಇನ್ನಷ್ಟು ಹೆಚ್ಚಾಗಿದ್ದು, ಎಲ್ಲಿಂದ ತೀರಿಸುವುದು ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ಮುಂದಿನ ಸ್ಥಿತಿಯನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ಏನಾದರೂ ಮಾಡಿ ಮುಗಿಸಲೇಬೇಕಿದೆ ಎಂದು ಗೆದ್ದಲಹಳ್ಳಿಯ ಅಬ್ರಹಾಂ ನಿಟ್ಟುಸಿರು ಬಿಡುತ್ತಾರೆ.

ಮನೆ ನಿರ್ಮಾಣಕ್ಕೆ ಗುತ್ತಿಗೆ ಕೊಟ್ಟವರು, ನಿರ್ದಿಷ್ಟ ಮೊತ್ತಕ್ಕೆ ಒಪ್ಪಿಗೆ ಮಾಡಿಕೊಂಡವರು, ಕೆಲಸಕ್ಕೆ ಇಂತಿಷ್ಟು ಕೂಲಿನಿಗದಿಪಡಿಸಿ ಕೊಂಡವರು ಈಗ ಅಷ್ಟು ಹಣ ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಕಾರ್ಮಿಕರ ಕೂಲಿಯೂ ಜಾಸ್ತಿಯಾಗಿದ್ದು, ಸ್ವಲ್ಪ ಹೆಚ್ಚಿಗೆ ಹಣಕ್ಕೆಗುತ್ತಿಗೆದಾರರೂ ಬೇಡಿಕೆಸಲ್ಲಿಸುತ್ತಿದ್ದಾರೆ. ಇದರಿಂದಾಗಿ ಮಾಲೀಕರು ಹಾಗೂ ನಿರ್ಮಾಣದಲ್ಲಿ ತೊಡಗಿಸಿಕೊಂಡವರ ನಡುವೆ ಮನಸ್ತಾಪ, ಕಿತ್ತಾಟ, ಭಿನ್ನಾಭಿಪ್ರಾಯಗಳು ಆರಂಭವಾಗಿವೆ ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ಹೇಳುತ್ತಾರೆ.

ಕಾರ್ಮಿಕರ ಸಂಕಷ್ಟ: ನಗರ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಿದ್ದ ನಿರ್ಮಾಣ ವಲಯದ ಚಟುವಟಿಕೆಗಳು ತಗ್ಗಿದ್ದರಿಂದ ಹಲವರಿಗೆ ಕೂಲಿ ಕೆಲಸವೂ ಸಿಗುತ್ತಿಲ್ಲ. ಜಿಲ್ಲೆಯಲ್ಲಿ 32 ಸಾವಿರ ನೋಂದಾಯಿತ ಕಟ್ಟಡ ಕಾರ್ಮಿಕರು ಇದ್ದು, ನೋಂದಾಯಿಸದವರನ್ನು ಗಮನಿಸಿದರೆ ಈ ಸಂಖ್ಯೆ ದುಪ್ಪಟ್ಟಾಗುತ್ತದೆ. ಕೋವಿಡ್‌ಗೆ ಮುಂಚೆ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಥಳೀಯ ಹಾಗೂ ವಲಸೆ ಕಾರ್ಮಿಕರು ಸೇರಿದಂತೆ ಸುಮಾರು 25 ಸಾವಿರ ಮಂದಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಈಗ ಈ ಸಂಖ್ಯೆ 10ರಿಂದ 12 ಸಾವಿರಕ್ಕೆ ಇಳಿದಿದೆ.

ಈ ಅಂಕಿ ಸಂಖ್ಯೆಯನ್ನು ಗಮನಿಸಿದರೆ ಎಷ್ಟು ಮಂದಿ ಉದ್ಯೋಗ ವಂಚಿತರಾಗಿದ್ದಾರೆ, ಯಾವ ಪ್ರಮಾಣದಲ್ಲಿ ನಿರ್ಮಾಣ ಚಟುವಟಿಕೆಗಳು ತಗ್ಗಿವೆ, ಬೆಲೆ ಏರಿಕೆ ಬಿಸಿ ಎಷ್ಟರ ಮಟ್ಟಿಗೆ ತಟ್ಟಿದೆ ಎಂಬುದು ತಿಳಿಯುತ್ತದೆ.

ಕೊಟ್ಟಿಗೆ ನಿರ್ಮಾಣವೂ ಕಷ್ಟ
ಮನೆ ನಿರ್ಮಾಣ ಕೈಗೆಟುಕದಂತಾಗಿದೆ. ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್– ಕೆಲವರಿಗೆ ಮಾತ್ರ ಲಾಭವಾಗಿದೆ. ಜನರು ತೆರಿಗೆ ಕಟ್ಟಬೇಕು. ಕೆಲವರು ಲಾಭ ಮಾಡಿಕೊಳ್ಳಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಕೃಷಿ ಕ್ಷೇತ್ರ ದುರಂತಕ್ಕೆ ಸಿಲುಕಿದಂತೆ ಕಟ್ಟಡ ಕಾರ್ಮಿಕರೂ ಅದೇ ಸ್ಥಿತಿಗೆ ತಲುಪಿದ್ದಾರೆ. ಈಗಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಮನೆ ಕಟ್ಟಿಸುವುದು ಹೋಗಲಿ, ದನದ ಕೊಟ್ಟಿಗೆನಿರ್ಮಿಸಿಕೊಳ್ಳುವುದು ಕಷ್ಟಕರವಾಗಿದೆ.
-ಬಿ.ಉಮೇಶ್, ಕಟ್ಟಡ ಕಾರ್ಮಿಕರ ಸಂಘದ ಮುಖಂಡ

***

ಬೆಲೆ ಏರಿಕೆಯಿಂದ ಯಾರೂ ಹೊಸದಾಗಿ ಮನೆ ನಿರ್ಮಿಸಲು ಮುಂದಾಗುತ್ತಿಲ್ಲ. ಈಗಾಗಲೇ ಕೆಲಸ ಆರಂಭಿಸಿದವರು ಸಾಲಸೋಲ ಮಾಡಿ ಪೂರ್ಣಗೊಳಿಸುತ್ತಿದ್ದಾರೆ. ಕಟ್ಟಡ ಕಾರ್ಮಿಕರಿಗೆ ಎರಡು ವರ್ಷದಿಂದ ಸರಿಯಾಗಿ ಕೆಲಸವೇ ಸಿಗದಾಗಿದೆ. ಇದೇ ರೀತಿ ಬೆಲೆ ಏರಿಕೆಯಾದರೆ ಜನರು ಮನೆ ಕಟ್ಟುವುದನ್ನೇ ನಿಲ್ಲಿಸಬಹುದು ಎಂಬ ಆತಂಕ ಎದುರಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಮೊದಲು ಬೆಲೆ ಏರಿಕೆ ನಿಯಂತ್ರಿಸಬೇಕು.
-ಗಿರೀಶ್, ಕಾರ್ಮಿಕ ಸಂಘದ ಮುಖಂಡ

***

ಕೆಲಸ ಸಿಗುತ್ತಿಲ್ಲ
ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಿಂದ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು, ಸಾಕಷ್ಟು ಜನರು ಮನೆ ನಿರ್ಮಾಣ ಕಾಮಗಾರಿ ನಿಲ್ಲಿಸಿದ್ದಾರೆ. ಕಾರ್ಮಿಕರಿಗೆ ಕೆಲಸ ಸಿಗದಾಗಿದ್ದು, ತೊಂದರೆಗೆ ಸಿಲುಕಿದ್ದಾರೆ.
-ಆನಂದ್, ಮೇಸ್ತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT