ತಿಪಟೂರು: ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಯೋಜನೆಯ ಕಾಮಗಾರಿಗೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಪರಿಹಾರದ ಹಣ ನೀಡದ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮತ್ತು ಪರಿಹಾರಕ್ಕೆ ಆಗ್ರಹಿಸಿ ರೈತರು ಕಾಮಗಾರಿಯ ಸ್ಥಳದಲ್ಲಿಯೇ ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿದ್ದಾರೆ.
ಹಾಲ್ಕುರಿಕೆ ಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 26 ಕೆರೆಗಳಿಗೆ ನೀರು ತುಂಬಿಸುವ ನಾಲಾ ಕಾಮಗಾರಿಯನ್ನು ತಿಗಡರಹಳ್ಳಿ, ಲಕ್ಮಗೊಂಡನಹಳ್ಳಿ ಗ್ರಾಮದ ಬಳಿ ರೈತರು ಭಾನುವಾರ ತಡೆದಿದ್ದರು.
ಗುತ್ತಿಗೆದಾರರು ಪ್ರಭಾವಿಗಳ ಬೆಂಬಲದಲ್ಲಿ ಮತ್ತೆ ಕಾಮಗಾರಿ ಪ್ರಾರಂಭಿಸುತ್ತಾರೆ ಎಂದು ಕಾಮಗಾರಿಯ ಸ್ಥಳದಲ್ಲಿ ಧರಣಿಗೆ ಮುಂದಾಗಿದ್ದಾರೆ.
ರೈತ ಚಂದನ್ ಮಾತನಾಡಿ, 2015ರಲ್ಲಿ ಜೆ.ಸಿ.ಮಾಧುಸ್ವಾಮಿ ಅವರು ಪೂರ್ಣ ಪರಿಹಾರದ ಹಣ ನೀಡುವವರೆಗೂ ಕಾಮಗಾರಿಗೆ ಅವಕಾಶ ಕೊಡಬೇಡಿ ಎಂದಿದ್ದರು. ಈಗ ಜಮೀನು ಬಿಡುವಂತೆ ಹೇಳುತ್ತಿದ್ದಾರೆ. ಪ್ರಾಣ ಬಿಟ್ಟರೂ ಸರಿ ಪರಿಹಾರ ದೊರೆಯುವವರೆಗೂ ಜಮೀನು ಬಿಡುವುದಿಲ್ಲ ಎಂದರು.
ಹಸಿರು ಸೇನೆ ತಾಲ್ಲೂಕು ಅಧ್ಯಕ್ಷದೇವರಾಜು, ರೈತ ಸಂಘದ ಶಂಕರಣ್ಣ, ಸೌಭಾಗ್ಯ, ರೈತರಾದ ಗಂಗಾಧರ್, ಶಂಕರಪ್ಪ, ಉಮೇಶ್, ಕಂಚಿರಾಯ, ದಿನೇಶ್, ಮಹಲಿಂಗಯ್ಯ, ಶಶಿಧರ್, ಜೀವನ್, ಬೀರೇಶ್, ಜಯಾನಂದ್ ಅರುಣ್ಕುಮಾರ್ ಪ್ರತಿಭಟನೆಯಲ್ಲಿ ಇದ್ದರು.