ತುಮಕೂರು: ವಿದ್ಯಾರ್ಥಿಗಳು ಪೂರ್ವಗ್ರಹ ಪೀಡಿತರಾಗದೆ, ವೈಜ್ಞಾನಿಕ ಮನೋಧರ್ಮ ರೂಢಿಸಿಕೊಳ್ಳಬೇಕು. ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಸಲಹೆ ಮಾಡಿದರು.
ವಿ.ವಿಯಲ್ಲಿ ಶುಕ್ರವಾರ ಕಲಾ ಕಾಲೇಜು ಹಾಗೂ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ‘ಭಾರತ ಸಂವಿಧಾನ ಮತ್ತು ವೈಜ್ಞಾನಿಕ ಮನೋಧರ್ಮ’ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಮೌಢ್ಯವನ್ನು ಸಾರುವವರು ಅನೇಕರಿದ್ದಾರೆ. ಅವರು ಜನರನ್ನು ವಾಸ್ತವ ಪ್ರಜ್ಞೆಯಿಂದ ದೂರ ಮಾಡುತ್ತಿದ್ದಾರೆ. ಅವರ ಕೃತ್ಯಗಳನ್ನು ಕ್ಷಮಿಸಬಾರದು, ಶಿಕ್ಷಿಸಬೇಕು ಎಂದರು.
ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ವಿದ್ಯಾರ್ಥಿಗಳು ಎಲ್ಲ ವಿಷಯಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಮೂಢನಂಬಿಕೆಗಳಿಂದ ಮುಕ್ತರಾಗಿ ವೈಜ್ಞಾನಿಕ ಆಲೋಚನೆ, ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.
ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ‘ಮೌಢ್ಯತೆಯಿಂದ ವಿಮುಕ್ತಿ ಪಡೆದ ವಿದ್ಯಾವಂತರು ಬುದ್ಧಿವಂತರೆನಿಸಿಕೊಳ್ಳುತ್ತಾರೆ. ದೇಶದ ಪ್ರಗತಿ ವಿಚಾರಶೀಲತೆಯಿಂದ ಮಾತ್ರ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
ಸಪ್ತಗಿರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ.ನಿರಂಜನಾರಾಧ್ಯ, ವಿ.ವಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ಸಂಯೋಜಕಿ ಕೆ.ಎಸ್.ಗಿರಿಜಾ, ಆಪ್ತ ಸಮಾಲೋಚನಾ ಘಟಕದ ಸಂಯೋಜಕಿ ಈ.ವನಜಾಕ್ಷಿ ಉಪಸ್ಥಿತರಿದ್ದರು.