ಕೋರ: ಏ. 18ರಂಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ಒಂದು ಪ್ಯಾಕೆಟ್ ತೊಗರಿ ಬೇಳೆ ನೀಡಿ ಪ್ರೋತ್ಸಾಹಿಸುವ ವಿನೂತನ ಮತದಾನ ಜಾಗೃತಿ ಅಭಿಯಾನವನ್ನು ಕೃಪಾ ಫುಡ್ಸ್ ಇಂಡಿಯಾ ಹಮ್ಮಿಕೊಂಡಿದೆ.
ರಾಜ್ಯದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಸರ್ಕಾರ, ಸಂಘ ಸಂಸ್ಥೆಗಳು ಹಲವಾರು ಭಿನ್ನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇವರೊಂದಿಗೆ ಕೈ ಜೋಡಿಸಿ ಮತದಾನ ಪ್ರಮಾಣ ಹೆಚ್ಚಿಸಲು ಕೃಪಾ ಫುಡ್ಸ್ ಇಂಡಿಯಾ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಕೃಪಾ ಫುಡ್ಸ್ ಇಂಡಿಯಾ ತೊಗರಿ ಬೇಳೆ ಗಿರಣಿ ಏ. 17ರಂದು ಉದ್ಘಾಟನೆಯಾಗಿದ್ದು, ಏ. 18ರ ಸಂಜೆವರೆಗೆ ವಸಂತ ನರಸಾಪುರ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಮತ ಚಲಾಯಿಸಿ ಬಂದ ಮತದಾರರು ತೊಗರಿ ಬೇಳೆಯನ್ನು ಪಡೆಯಬಹುದಾಗಿದೆ.
ಮತದಾನ ಜಾಗೃತಿ ಅಭಿಯಾನದ ಜೊತೆಗೆ ತೊಗರಿ ಗಿರಣಿಯಲ್ಲಿ ತೊಗರಿ ಬೇಳೆ ಬೇರ್ಪಟ್ಟ ನಂತರ ಬರುವ ತೌಡನ್ನು ಸಿದ್ಧಗಂಗಾ ಮಠದ ಹಸುಗಳಿಗೆ ಉಚಿತವಾಗಿ ವಿತರಿಸಲಿದೆ ಎಂದು ಕೃಪಾ ಫುಡ್ಸ್ ಇಂಡಿಯಾ ವ್ಯಸ್ಥಾಪಕ ನಿರ್ದೇಶಕ ಎನ್.ಕೆ.ಬಸವರಾಜ್ ಹೇಳಿದರು.