ಹುಳಿಯಾರು: ಚುನಾವಣೆ ವಿಭಾಗದ ಎಡವಟ್ಟಿನಿಂದ ಹೋಬಳಿಯ ರಂಗನಕೆರೆ ಗ್ರಾಮದ ಎಂ.ಕೆ.ಅಖಿಲ್ ಮತದಾನದಿಂದ ವಂಚಿತರಾಗಿದ್ದಾರೆ.
ರಂಗನಕೆರೆ ಗ್ರಾಮದಿಂದ ದೂರದ ಸೋಮನಹಳ್ಳಿ ಮತಗಟ್ಟೆಗೆ ತಮ್ಮ 2ನೇ ಬಾರಿಯ ಮತ ಚಲಾಯಿಸಲು ಉತ್ಸುಕರಾಗಿ ಬಂದಿದ್ದರು. ಆದರೆ, ಮತದಾನ ಕೇಂದ್ರದಲ್ಲಿದ್ದ ಮತದಾರರ ಪಟ್ಟಿಯಲ್ಲಿ ಇವರ ಹೆಸರು ಇರಲಿಲ್ಲ. ಆದ್ದರಿಂದ ಚುನಾವಣಾಧಿಕಾರಿಗಳು ಮತದಾನ ಮಾಡಲು ಅವಕಾಶ ನೀಡಲಿಲ್ಲ.
ಇದರಿಂದ ಬೇಸರಗೊಂಡ ಅಖಿಲ್, ‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದರಿಂದ ಈ ಬಾರಿಯು ಪಟ್ಟಿಯಲ್ಲಿ ಇರುತ್ತದೆ ಎಂದು ಖಚಿತ ಪಡಿಸಿಕೊಂಡಿರಲಿಲ್ಲ. ಆದರೆ ನನ್ನ ಹೆಸರು ಡಿಲಿಟ್ ಆಗಿರುವುದು ಕಂಡು ಬೇಸರವಾಗಿದೆ. ಸಂವಿಧಾನದ ಅತ್ಯಂತ ಜವಾಬ್ದಾರಿಯುತ ಕರ್ತವ್ಯ ನಿಭಾಯಿಸಲು ಆಗಲಿಲ್ಲ ಎಂಬ ನೋವು ಇನ್ನೊಮ್ಮೆ ಮತದಾನ ಮಾಡುವವರೆಗಗೂ ಹೋಗದು’ ಎಂದರು.
ಸ್ಥಳಿಯ ಬಿಎಲ್ಒ ಆರ್.ಗಜೇಂದ್ರಪ್ಪ ಮಾತನಾಡಿ, ನಾನು ಹೆಸರು ತೆಗೆದುಹಾಕಲುಅರ್ಜಿ ನೀಡಿಲ್ಲ. ಆದರೆ, ಹೇಗೆ ಡಿಲಿಟ್ ಆಯಿತು ಎಂಬುದೆ ತಿಳಿಯುತ್ತಿಲ್ಲ’ ಎಂದರು.
ಇಂತಹ ಹಲವು ಪ್ರಕರಣಗಳು ಹೋಬಳಿ ವ್ಯಾಪ್ತಿಯಲ್ಲಿ ಕಂಡು ಬಂದವು. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಅವಕಾಶ ವಂಚಿತರು ಆಗ್ರಹಿಸಿದರು.