ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪೀಳಿಗೆಯಲ್ಲಿ ಕೌಟುಂಬಿಕ ಮೌಲ್ಯ ಕ್ಷೀಣ: ಅನ್ನಪೂರ್ಣ ವೆಂಕಟನಂಜಪ್ಪ

Last Updated 17 ಮೇ 2019, 14:19 IST
ಅಕ್ಷರ ಗಾತ್ರ

ತುಮಕೂರು: ‘ಸಣ್ಣಪುಟ್ಟ ಕಾರಣಗಳಿಗೆಲ್ಲ ಮನಸ್ತಾಪ ಮಾಡಿಕೊಂಡು ಕೌಟುಂಬಿಕ ಸಮಸ್ಯೆಗಳನ್ನು ಇಂದಿನ ಪೀಳಿಗೆ ಉಲ್ಬಣ ಮಾಡಿಕೊಳ್ಳುತ್ತಿದೆ’ ಎಂದು ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ವಿಷಾದಿಸಿದರು.

ಇಲ್ಲಿನ ಸಾಂತ್ವನ ಕುಟುಂಬ ಸಲಹಾ ಕೇಂದ್ರದಲ್ಲಿ ಈಚೆಗೆ ವರದಕ್ಷಿಣೆ ವಿರೋಧಿ ವೇದಿಕೆಯು ಆಯೋಜಿಸಿದ್ದ ವಿಶ್ವ ಕುಟುಂಬ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇಂದು ಜನರ ಮನಸ್ಸುಗಳು ಬಹಳ ಸೂಕ್ಷ್ಮವಾಗಿವೆ. ಸಣ್ಣಪುಟ್ಟ ಕಾರಣಗಳಿಗೆಲ್ಲ ಕುಟುಂಬವನ್ನೇ ತ್ಯಜಿಸುವ, ವಿವಾಹ ವಿಚ್ಛೇದನಕ್ಕೆ ಮುಂದಾಗುವ ಪ್ರಕರಣಗಳು ಗಾಬರಿ ಹುಟ್ಟಿಸುತ್ತವೆ’ ಎಂದರು.

ನಗರೀಕರಣ ಹೆಚ್ಚಾದಂತೆಲ್ಲಾ ಬೇಬಿ ಸಿಟ್ಟಿಂಗ್‌ನಿಂದ ಹಿಡಿದು ಮಕ್ಕಳ ವಿದ್ಯಾಭ್ಯಾಸವೆಲ್ಲ ಹೊರಗಡೆಯೇ ನಡೆಯುತ್ತದೆ. ಮನೆಯಲ್ಲಿ ಕುಳಿತು ಚರ್ಚಿಸುವ ವಾತಾವರಣವೇ ಇಲ್ಲ. ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಮನೆಯಲ್ಲಿ ಹಿಂದೆ ಹೇಳಿಕೊಡುತ್ತಿದ್ದ ನೀತಿ ಕಥೆಗಳು ಈಗ ಮಾಯವಾಗಿವೆ ಎಂದು ನುಡಿದರು.

ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ, ‘ಕುಟುಂಬಗಳು ಇಂದು ವಿಘಟನೆಯತ್ತ ಸಾಗುತ್ತಿವೆ. ಬದುಕಿನ ಮೌಲ್ಯಗಳನ್ನು ತುಂಬುವ ಹಾಗೂ ಬದುಕಿನ ಮಾರ್ಗ ಹೇಳಿಕೊಡುವ ಹಿರಿಯರೇ ಇಲ್ಲವಾಗುತ್ತಿದ್ದಾರೆ. ವೈಯಕ್ತಿಕ ಪ್ರತಿಷ್ಠೆಗೆ ಬಿದ್ದು ಸಂಸಾರಗಳನ್ನು ದಂಪತಿಗಳು ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

‘ಮಾನವೀಯತೆ, ಕುಟುಂಬ ಪ್ರೀತಿ ಕಣ್ಮರೆಯಾಗುತ್ತಿದ್ದು, ಯಾಂತ್ರಿಕ ಜೀವನಕ್ಕೆ ಮಾರು ಹೋಗುತ್ತಿರುವುದರಿಂದ ಕುಟುಂಬದ ಕಲ್ಪನೆಯೇ ವಿಘಟನೆಗೊಳ್ಳುತ್ತಿದೆ. ಇದು ಮುಂದಿನ ದಿನಗಳಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಲಿದೆ’ ಎಂದರು.

ರಾಜೇಶ್ವರಿ ಚಂದ್ರಶೇಖರ್ ಮಾತನಾಡಿ, ‘ಇಂದು ಹಬ್ಬ ಹರಿದಿನಗಳಿಗೆ ಮಹತ್ವವೇ ಇಲ್ಲದಂತಾಗಿದೆ. ಒಟ್ಟಿಗೆ ಕುಳಿತು ಕುಟುಂಬದ ಸದಸ್ಯರೆಲ್ಲ ಊಟ ಮಾಡುತ್ತ ಚರ್ಚೆ ಮಾಡುವ ದಿನಗಳು ದೂರವಾಗುತ್ತಿವೆ. ಮೊಬೈಲ್ ಯುಗದಲ್ಲಿ ಕುಟುಂಬದ ಪ್ರತಿಯೊಬ್ಬರೂ ಒಂದೊಂದು ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದಾರೆ. ಇನ್ನು ಕೆಲವರು ಟಿ.ವಿ.ಗಳ ಮುಂದೆ ಕುಳಿತಿರುತ್ತಾರೆ. ಹೀಗಾದರೆ ಕೌಟುಂಬಿಕ ಸಂಬಂಧಗಳು ಉತ್ತಮಗೊಳ್ಳುವುದಾದರೂ ಹೇಗೆ ಎಂದು ಕಳವಳ ವ್ಯಕ್ತಪಡಿಸಿದರು.

ಗೀತಾ ನಾಗೇಶ್ ಮಾತನಾಡಿ, ‘ಒಟ್ಟು ಕುಟುಂಬದ ಕಲ್ಪನೆಯೇ ಇಂದು ಮರೆಯಾಗುತ್ತಿದೆ. ಅಜ್ಜ, ಅಜ್ಜಿ ಸಂಬಂಧಗಳು ಇಂದಿನ ಪೀಳಿಗೆಗೆ ಬೇಕಾಗಿಲ್ಲ. ನಾವಿಬ್ಬರು ನಮ್ಮ ಮಕ್ಕಳು ಎಂಬುದಕ್ಕೆ ಕುಟುಂಬ ಸೀಮಿತವಾಗಿದೆ. ವಯಸ್ಸಾದವರನ್ನು ವೃದ್ಧಾಶ್ರಮಗಳಲ್ಲಿ ನೋಡುವಂತಾಗಿದೆ. ಇದು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಇಡೀ ಸಮಾಜ ಯೋಚಿಸಬೇಕಿದೆ’ ಎಂದರು.

ವಕೀಲರಾದ ನರಸಿಂಹಯ್ಯ, ಸಾಂತ್ವನ ಕೇಂದ್ರದ ಸಮಾಲೋಚಕಿಯರಾದ ಅಂಬುಜಾಕ್ಷಿ, ಸವಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT