ತುಮಕೂರು: ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಕೃಷಿ ಇಲಾಖೆಯು 3,81,300 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದೆ. ಆದರೆ ಇದು ಕಳೆದ ವರ್ಷ ಇಲಾಖೆ ಹೊಂದಿದ್ದ ಗುರಿಗಿಂತ ಕಡಿಮೆ ಇದೆ.
ಈ ವರ್ಷ 1,93,350 ಹೆಕ್ಟೇರ್ ಏಕದಳ, 56,885 ಹೆಕ್ಟೇರ್ ದ್ವಿದಳ, 1,29,665 ಹೆಕ್ಟೇರ್ನಲ್ಲಿ ಎಣ್ಣೆಕಾಳುಗಳು, 1,400 ಹೆಕ್ಟೇರ್ನಲ್ಲಿ ಕಬ್ಬು ಬಿತ್ತನೆ ಗುರಿ ಇದೆ. ರಾಗಿ, ಜೋಳ, ಸಿರಿಧಾನ್ಯ ಸೇರಿದಂತೆ 1,93,350 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯಗಳನ್ನು ಬೆಳೆಯುವ ಉದ್ದೇಶವನ್ನು ಇಲಾಖೆ ಹೊಂದಿದೆ.
ತೊಗರಿ, ಹುರುಳಿ, ಹೆಸರು, ಅವರೆ ಸೇರಿದಂತೆ ದ್ವಿದಳ ಧಾನ್ಯ, ಆಹಾರ ಧಾನ್ಯಗಳನ್ನು 2,50,235 ಹೆಕ್ಟೇರ್ ಗುರಿ ಇದೆ. ಶೇಂಗಾ, ಸೂರ್ಯಕಾಂತಿ, ಎಳ್ಳು, ಹತ್ತಿ ಸೇರಿದಂತೆ ವಾಣಿಜ್ಯ ಬೆಳೆಯನ್ನು ಸಹ ಪ್ರಮುಖವಾಗಿವೆ.
ಕಳೆದ ವರ್ಷದ ಪ್ರಗತಿ: 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 4,17,780 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ 2,61,558 ಹೆಕ್ಟೇರ್ ಮಾತ್ರ ಬಿತ್ತನೆ ಮಾಡಲಾಗಿತ್ತು.
ಜಿಲ್ಲೆಯಲ್ಲಿ ಈವರೆಗೆ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಅಲಸಂದೆ, ತೊಗರಿ ಬೆಳೆಗಳ 1,093.58 ಕ್ವಿಂಟಲ್ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಿಂದ ವಿತರಿಸಲಾಗಿದೆ.
‘ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಂಗಾಮಿಗಾಗಿ 14,534 ಟನ್ ರಸಗೊಬ್ಬರಕ್ಕೆ ಬೇಡಿಕೆ ಇತ್ತು. ಪ್ರಸ್ತುತ ಅಧಿಕೃತ ಮಾರಾಟಗಾರರು, ರಾಜ್ಯ ಮಾರುಕಟ್ಟೆ ಒಕ್ಕೂಟದಲ್ಲಿ 16,177 ಟನ್ ರಸಗೊಬ್ಬರದ ದಾಸ್ತಾನು ಇದೆ. ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜ ಸುಲೋಚನ ತಿಳಿಸಿದ್ದಾರೆ.