ತಿಪಟೂರು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಭಾರ ಕಾರ್ಯದರ್ಶಿಯಾಗಿ ಒಂದು ವಾರದ ಹಿಂದೆಯಷ್ಟೇ ಅಧಿಕಾರವಹಿಸಿಕೊಂಡ ಎಸ್.ಬಿ.ನ್ಯಾಮಗೌಡ ಅವರ ಬ್ಯಾಂಕ್ ಖಾತೆಯ ಒಟಿಪಿ ನಂಬರ್ ಪಡೆದ ವಂಚಕರು ₹ 6 ಲಕ್ಷ ಹಣವನ್ನು ಕಳೆದ ಶುಕ್ರವಾರ ಡ್ರಾ ಮಾಡಿಕೊಂಡಿದ್ದಾರೆ.
₹ 2 ಲಕ್ಷದಂತೆ ಮೂರು ಬಾರಿ ತಮ್ಮ ಖಾತೆಯಿಂದ ಆನ್ ಲೈನ್ ವಂಚಕರು ಹಣ ಡ್ರಾ ಮಾಡಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡಿ ಹಣವನ್ನು ವಾಪಸ್ ಕೊಡಿಸಬೇಕು ಎಂದು ತಿಪಟೂರು ನಗರ ಠಾಣೆಗೆ ನ್ಯಾಮಗೌಡ ಅವರು ದೂರು ನೀಡಿದ್ದಾರೆ.
ಅ.11ರಂದು ಸಂಜೆ 4ರಿಂದ 4.40ರ ಸುಮಾರು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ತಮ್ಮ ಮೊಬೈಲ್ಗೆ ಎಸ್ಬಿಐ ಕೆವೈಸಿ ಎಂದು 8759018370 ದಿಂದ ಕರೆ ಬಂದಿತು. ಆಗ ಒಟಿಪಿ ಸಂಖ್ಯೆಯನ್ನು ಅನಾಮಧೇಯ ವ್ಯಕ್ತಿ ಕೇಳಿದ. ನಾನು ಒಟಿಪಿ ನಂಬರ್ ಹೇಳಿದ್ದೆ.
ಇದಾದ ಸ್ವಲ್ಪ ಹೊತ್ತಿನ ಬಳಿಕ ನನ್ನ ಬ್ಯಾಂಕ್ ಖಾತೆಯಿಂದ ಹಣವನ್ನು ಆನ್ಲೈನ್ ಮೂಲಕ ಡ್ರಾ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ನ್ಯಾಮಗೌಡ ವಿವರಿಸಿದ್ದಾರೆ.