ತುಮಕೂರು: ಸಮಾಜದಲ್ಲಿ ನಾವೆಲ್ಲರೂ ಸಮಾಜ ಸೇವಕರಾಗಿ ಕೆಲಸ ಮಾಡಬೇಕು. ಸ್ವಾತಂತ್ರ್ಯ ಹೋರಾಟಗಾರರ ಶ್ರಮ, ಸಾಧನೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಯೋಗಾನಂದ್ ಹೇಳಿದರು.
ಭಾನುವಾರ ವೀರಸೌಧದಲ್ಲಿ ನಡೆದ 73ನೇ ಸ್ವಾತಂತ್ರ್ಯ ದಿನಾಚರಣೆ ನೆನಪು ಕಾರ್ಯಕ್ರಮ ಮತ್ತು ವೀರಸೌಧದ 6ನೇ ವಾರ್ಷಿಕೋತ್ಸವ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ದೇಶಭಕ್ತಿ ಗೀತೆ, ಗಾಯನ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ವೇಷಭೂಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ವೀರಸೌಧ ಕಟ್ಟಡ ಅಭಿವೃದ್ಧಿಗೆ ಸರ್ಕಾರದಿಂದ ನಿಯಮಾವಳಿ ಪ್ರಕಾರ ಅನುದಾನ ದೊರಕಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಕಾಮಾಕ್ಷಿ ಮಾತನಾಡಿ, ‘ ವಿದ್ಯಾರ್ಥಿಗಳಲ್ಲಿ ಶಿಸ್ತು ಬಹುಮುಖ್ಯ. ದೇಶಭಕ್ತಿ, ಸೇವಾ ಮನೊಭಾವ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.
ರೋಟರಿ ತುಮಕೂರು ಸಿಟಿ ಅಧ್ಯಕ್ಷ ವಿ.ಎಸ್.ಕೆ.ಸ್ವಾಮಿ ಅವರು ಸ್ಪರ್ಧಾ ವಿಜೇತರಿಗೆ ನೆನಪಿನ ಕಾಣಿಕೆ ವಿತರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಡಿ.ಎನ್.ಸಂಪತ್ ಮಾತನಾಡಿ,‘ ಸ್ವಾತಂತ್ರ್ಯ ಲಭಿಸಿ 73 ವರ್ಷ ಲಭಿಸಿದ್ದರೂ ಗಮನಾರ್ಹ ಪ್ರಗತಿಯಾಗಿಲ್ಲ. ಭ್ರಷ್ಟಾಚಾರ ಕಡಿಮೆ ಆಗಿಲ್ಲ. ದೇಶದ ಬಗ್ಗೆ ಕಾಳಜಿ ಕಡಿಮೆ ಆಗುತ್ತಿದೆ. ಸಂಪನ್ಮೂಲಗಳ ಸದ್ಬಳಕೆ ಆಗುತ್ತಿಲ್ಲ ಎಂದು ವಿಷಾದಿಸಿದರು.
ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಧ್ವಜಾರೋಹಣ, ಧ್ವಜವಂದನೆ ನೆರವೇರಿಸಿದರು.
ಸ್ವಾತಂತ್ರ್ಯ ದಿನಾಚರಣೆ ನೆನಪಿಗಾಗಿ ಸಂಚಿಕೆ ಹಾಗೂ ದೇಶಭಕ್ತಿ ಗೀತೆಗಳ ಧ್ವನಿಸುರುಳಿ ( ಬೋಲೊ ಭಾರತ್ ಮಾತಾಕಿ ಜೈ) ಬಿಡುಗಡೆ ಮಾಡಿದರು. ಗೀತ ಗಂಗೋತ್ರಿ ಸುಗಮ ಸಂಗೀತ ಶಿಕ್ಷಣ ಸಂಸ್ಥೆಎಯ ತು.ಮ.ಬಸವರಾಜು ಇದ್ದರು.