ತುಮಕೂರು: ನಗರದ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ರಥೋತ್ಸವ ಶುಕ್ರವಾರ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ನಡೆಯಿತು. ಸುಡುಬಿಸಿಲು ಲೆಕ್ಕಿಸದೆ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.
ಬೆಳಿಗ್ಗೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅಭಿಷೇಕ, ಗೆಜ್ಜೆಪೂಜೆ, ಮಂಟಪ ಪಡಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.
ರಥಕ್ಕೆ ಬೃಹತ್ ಮಾಲೆಗಳನ್ನು ಕ್ರೇನ್ ಸಹಾಯದಿಂದ ಹಾಕಿದ್ದು ವಿಶೇಷವಾಗಿತ್ತು. ಮಧ್ಯಾಹ್ನ 1ಕ್ಕೆ ದೇವಸ್ಥಾನದ ಆವರಣದಲ್ಲಿ ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು. ಬಾಳೆಹಣ್ಣು, ದವನವನ್ನು ರಥದ ಉತ್ಸವ ಮೂರ್ತಿಗೆ ಅರ್ಪಿಸಿ ಭಕ್ತಿ ಮೆರೆದರು.
ರಥೋತ್ಸವ ಸಮಯಕ್ಕೆ ತುಮಕೂರು ನಗರ ಹಾಗೂ ಜಿಲ್ಲೆಯ ವಿವಿಧ ಕಡೆಯ ಭಕ್ತರು ಏಕ ಕಾಲಕ್ಕೆ ಧಾವಿಸಿದ್ದರಿಂದ ನೂಕುನುಗ್ಗಲು ಕಂಡು ಬಂದಿತು. ಬಳಿಕ ದೇವಸ್ಥಾನದ ಆವರಣದಲ್ಲಿ ಭಕ್ತರು ಉರುಳು ಸೇವೆ ನಡೆಸಿದರು.
ಕೋಸಂಬರಿ, ಪಾನಕ ವಿತರಣೆ: ರಥೋತ್ಸವಕ್ಕೆ ಬಂದ ಭಕ್ತರಿಗೆ ಸಂಘ ಸಂಸ್ಥೆಗಳು, ಹರಕೆ ಹೊತ್ತವರು ಪಾನಕ, ಮಜ್ಜಿಗೆ, ಕೋಸಂಬರಿ, ಉಪಾಹಾರ , ಊಟದ ವ್ಯವಸ್ಥೆ ಮಾಡಿದ್ದರು. ಶೆಟ್ಟಿಹಳ್ಳಿ ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲೂ ಸಂಘ ಸಂಸ್ಥೆಯವರು ಪಾನಕ, ಮಜ್ಜಿಗೆ ವಿತರಿಸಿದರು.
ನೆಲ ಸುಡುತ್ತಿದ್ದರಿಂದ ಭಕ್ತರಿಗೆ ನಿಲ್ಲಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಟ್ಯಾಂಕರ್ಗಳಿಂದ ನೆಲಕ್ಕೆ ನೀರು ಹರಿಸಿ ತಂಪು ಮಾಡಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ವಿಶೇಷವಾಗಿ ನಗರ ಸಾರಿಗೆ ಬಸ್ಗಳ ಸಂಚಾರ ವ್ಯವಸ್ಥೆ ಹೆಚ್ಚು ಮಾಡಲಾಗಿತ್ತು.