ಹುಮನಾಬಾದ್: ‘ ಗೌತಮ ಬುದ್ಧರ ತತ್ವ ಪಾಲನೆಯಿಂದ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ. ಈ ನಿಟ್ಟಿನಲ್ಲಿ ಬೌದ್ಧಧರ್ಮ ಅನುಯಾಯಿಗಳು ಹೆಚ್ಚು ಪ್ರಚಾರಕ್ಕೆ ತರಲು ಯತ್ನಿಸಬೇಕು’ ಎಂದು ಆಣದೂರ ಭಂತೆ ಜ್ಞಾನಸಾಗರ ಹೇಳಿದರು.
ಇಲ್ಲಿನ ಸಿದ್ಧಾರ್ಥ ಕಾಲೊನಿಯ ಬೌದ್ಧ ವಿಹಾರದಲ್ಲಿ ಶನಿವಾರ ಏರ್ಪಡಿಸಿದ್ದ ಬುದ್ಧ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ, ಅವರು ಮಾತನಾಡಿದರು.
‘ಮನುಷ್ಯ ಬದುಕುವುದಕ್ಕಾಗಿ ಹಣ ಗಳಿಸುತ್ತಾನೆಯೇ ಹೊರತು ಹಣ ಗಳಿಸುವುದಕ್ಕಾಗಿ ಬದುಕುವುದಿಲ್ಲ. ಮನುಷ್ಯನ ದುಃಖಕ್ಕೆ ಅವನಲ್ಲಿರುವ ಅತಿ ಆಸೆ ಕಾರಣ. ಎಲ್ಲರನ್ನು ತನ್ನಂತೆ ಕಾಣುವ ಮನಸ್ಸು ನಮ್ಮದಾಗಿಸಿಕೊಳ್ಳುವ ಮೂಲಕ ನೆಮ್ಮದಿ ಜೀವನ ಸಾಗಿಸಬೇಕು’ ಎಂದು ಭಂತೆ ಜ್ಞಾನಸಾಗರ ಹೇಳಿದರು.
ಬುದ್ಧ ಪ್ರಕಾಶ, ಭಂತೆ ಬೋಧಿದತ್ತ ಮಂಡ್ಯ, ಭಂತೆ ವರಜ್ಯೋತಿ, ಮಿಲಿಂದ ಗುರೂಜಿ, ಹುಮನಾಬಾದ್ ಬೌದ್ಧ ಧರ್ಮ ಪ್ರಚಾರಕ ಧರ್ಮರಾಯ ಘಾಂಗ್ರೆ ಮಾತನಾಡಿದರು.
ಸಿದ್ಧಾರ್ಥ ಕಾಲೊನಿ ಬೌದ್ಧ ವಿಹಾರ ಸಮಿತಿ ಕೋಶಾಧ್ಯಕ್ಷ ಹಣಮಂತರಾವ್ ಗೌಡಗಾಂವಕರ್ ಸ್ವಾಗತಿಸಿದರು. ಸಮಿತಿ ಅಧ್ಯಕ್ಷ ಡಾ.ಜಯಕುಮಾರ ಸಿಂಧೆ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಕಾಂತ ಶಹಾಬಾದಕರ್ ನಿರೂಪಿಸಿದರು. ಕೃಷ್ಣಪ್ಪ ಬಿ.ಹಾಲ್ಗೊರ್ಟಾ ವಂದಿಸಿದರು.
ಮೆರವಣಿಗೆ: ಬುದ್ಧ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ಹೊರಟ ಬುದ್ಧ ಮೂರ್ತಿ ಮೆರವಣಿಗೆಗೆ ಭಂತೆ ಜ್ಞಾನಸಾಗರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಶರಣಪ್ಪ ದಂಡೆ, ಸುದರ್ಶನ ಮಾಳ್ಗೆ, ಜಗನ್ನಾಥ ಕಾಂಬ್ಳೆ, ಭೀಮಶಾ ಮರಪಳ್ಳಿ, ಶಿಕಾಂತ ಘಾವಲ್ಕರ್, ಮಿಲಿಂದ ಸಾಗರ್, ಕೆ.ಎಂ.ಗಜೇಂದ್ರ, ದಿಲೀಪ ಗಾಯಕವಾಡ್, ಗೌತಮ ಸಾಗರ, ನರಸಪ್ಪ ಪರ್ಸಾನೋರ, ಸುಕೇಶ ಹೊಸಮನಿ, ಮಾಣಿಕರಾವ್ ಬಿ.ಪವಾರ, ಭೀಮರಾವ್ ಓತಗಿ, ಅಶೋಕ ಸಜ್ಜನ್ ಮತ್ತು ನೂರಾರು ಸಂಖ್ಯೆಯ ಮಾತೆಯರು, ಮಕ್ಕಳು ಭಾಗವಹಿಸಿದ್ದರು.
ಬುದ್ಧ ಮೂರ್ತಿ ದರ್ಶನ: ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಬಿ.ಪಾಟೀಲ, ಜೆಡಿಎಸ್ ಅಭ್ಯರ್ಥಿ ನಸ್ಸಿಮೋದ್ದಿನ್ ಪಟೇಲ್, ಬಿಜೆಪಿ ಮುಖಂಡರಾದ ಬಸವರಾಜ ಆರ್ಯ, ಗಜೇಂದ್ರ ಕನಕಟಕರ್ ಅಲ್ಲದೇ ಇನ್ನೂ ವಿವಿಧ ಪಕ್ಷಗಳ ಮುಖಂಡರು ಬುದ್ಧ ಮೂರ್ತಿ ದರ್ಶನ ಪಡೆದರು.
**
ಹುಮನಾಬಾದ್ ಸಿದ್ಧಾರ್ಥ ಕಾಲೊನಿ ಬುದ್ಧ ವಿಹಾರದಲ್ಲಿ ಮಹಾತ್ಮ ಬುದ್ಧರ ಮೂರ್ತಿ ಪ್ರತಿಷ್ಠಾಪನೆ ಮೂಲಕ ಅನುಯಾಯಿಗಳ ಬಹು ವರ್ಷಗಳ ಬೇಡಿಕೆ ಈಡೇರಿದೆ
– ಡಾ.ಜಯಕುಮಾರ ಸಿಂಧೆ, ಅಧ್ಯಕ್ಷರು, ಸಿದ್ಧಾರ್ಥ ಕಾಲೋನಿ ಬುದ್ಧ ವಿಹಾರ ಸಮಿತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.