ತುಮಕೂರು: ‘ಕಳೆದ ಲೋಕಸಭಾ ಚುನಾವಣೆಗಿಂತ ಈ ಬಾರಿ ಹೆಚ್ಚು ಮತದಾನವಾಗಿದೆ. ದೇಶದ ಎಲ್ಲೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪರವಾದ ಅಲೆ ಇದೆ. ಆದ್ದರಿಂದ ನನ್ನ ಗೆಲುವು ಖಚಿತ’ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಭರವಸೆ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಪ್ರಮುಖವಾಗಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಸ್ಪರ್ಧಿಸಿದ್ದೇನೆ. ಆ ಅಭ್ಯರ್ಥಿ ಯಾರಾಗಿದ್ದರೂ ಅವರನ್ನು ಸೋಲಿಸುವುದು ನಮ್ಮ ಗುರಿ. ಇಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿ ಅಭ್ಯರ್ಥಿಯಾದರು. ನಾನು ಸ್ಪರ್ಧಿಸಿದ್ದು ದೇವೇಗೌಡರ ವಿರುದ್ಧ ಅಲ್ಲ’ ಎಂದರು.
ಚುನಾವಣೆ ಸುಸೂತ್ರವಾಗಿ ನಡೆಯುವಲ್ಲಿ ಅಧಿಕಾರಿಗಳ, ಪಕ್ಷದ ಕಾರ್ಯಕರ್ತರು, ಜಿಲ್ಲೆಯ ಮತದಾರರ ಹಾಗೂ ಮಾಧ್ಯಮದವರು ಸಹಕಾರ ನೀಡಿದ್ದಾರೆ. ಚುನಾವಣೆ ಯಾವುದೇ ಗೊಂದಲವಿಲ್ಲದೆ ಸುಗಮವಾಗಿ ನಡೆಯಿತು ಎಂದು ಕೃತಜ್ಞತೆ ಸಲ್ಲಿಸಿದರು.
ಅನಿವಾಸಿ ಭಾರತೀಯ ಸೌರವ್ ಬಾಬು ಮಾತನಾಡಿ, ‘ಅಮೆರಿಕದಿಂದ ಸುಮಾರು 5 ಸಾವಿರ ಎನ್ಆರ್ಐಗಳು (ಅನಿವಾಸಿ ಭಾರತೀಯರು) ರಾಜ್ಯಕ್ಕೆ ಬಂದು ಮತದಾನ ಕುರಿತು ಪ್ರಚಾರ ಮಾಡಿದ್ದಾರೆ. ಮತ ಚಲಾಯಿಸಿದ್ದಾರೆ’ ಎಂದರು.
ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವಪ್ರಸಾದ್, ಮುಖಂಡರಾದ ಎಂ.ಆರ್.ಹುಲಿನಾಯ್ಕರ್, ಹೆಬ್ಬಾಕ ರವಿ, ಸಿ.ಎನ್.ರಮೇಶ್, ನಾಗರಾಜರಾವ್, ರುದ್ರೇಶ್ ಹಾಗೂ ರವೀಶ್ ಇದ್ದರು.