ಶಿರಾ: ನಗರದಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಮತ್ತು ಆಡಳಿತ ವ್ಯವಸ್ಥೆ ವಿಲೀನಕ್ಕೆ ಶಾಸಕರು ಮುಂದಾಗಿರುವುದು ಸೂಕ್ತವಲ್ಲ. ಎರಡೂ ಆಸ್ಪತ್ರೆ ಸಿಬ್ಬಂದಿ ಮತ್ತು ಆಡಳಿತ ವ್ಯವಸ್ಥೆ ಪ್ರತ್ಯೇಕವಾಗಿದ್ದರೆ ಅನುಕೂಲ ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಕೆಲವು ತಾಲ್ಲೂಕು ಕೇಂದ್ರಗಳಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರ್ಕಾರ ಪ್ರಾರಂಭಿಸಿದೆ. ಅಸ್ಪತ್ರೆಗಳಲ್ಲಿ ಪ್ರತ್ಯೇಕ ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿಯ ಅವಶ್ಯಕತೆ ಇದೆ. ಇದೇ ನಿಟ್ಟಿನಲ್ಲಿ ಸರ್ಕಾರ ರೂಪರೇಷ ಸಿದ್ಧಪಡಿಸುತ್ತಿರುವುದು ಸ್ವಾಗತಾರ್ಹ ಎಂದರು.
ರಾಜ್ಯದಲ್ಲಿ ಬಹಳಷ್ಟು ಆಸ್ಪತ್ರೆಗಳು ಒಂದೇ ವೇದಿಕೆಯಲ್ಲಿ ಇದ್ದರೂ ಪ್ರತ್ಯೇಕ ಆಡಳಿತ ಅಧಿಕಾರಿಯನ್ನು ಹೊಂದಿರುತ್ತವೆ ಎಂದರು.
ಸಾರ್ವಜನಿಕರ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿ ಮತ್ತು ಆಡಳಿತ ವ್ಯವಸ್ಥೆಯನ್ನು ವಿಲೀನಗೊಳಿಸಲು ಶಾಸಕರು ಮುಂದಾಗಿರುವುದು ಖಂಡನೀಯ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವುದು ಎಂದರು.
ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ಶುಶ್ರೂಷಕರು ಇರುವರು. ಆಸ್ಪತ್ರೆಗೆ ಪ್ರತ್ಯೇಕ ಅನುದಾನ, ಔಷಧಿ ಬರುತ್ತವೆ ಮುಂದೆ ಎರಡು ಆಸ್ಪತ್ರೆ ವಿಲೀನವಾದರೆ ಹಲವು ಸವಲತ್ತು ದೊರೆಯವುದಿಲ್ಲ. ಇಲ್ಲಿರುವ ಸಿಬ್ಬಂದಿಯನ್ನು ಅಲ್ಲಿಗೆ, ಅಲ್ಲಿರುವ ಸಿಬ್ಬಂದಿಯನ್ನು ಇಲ್ಲಿಗೆ ಬದಲಾವಣೆ ಮಾಡುತ್ತಾ ಹೋದರೆ ಗುಣಮಟ್ಟದ ಚಿಕಿತ್ಸೆ ದೊರೆಯುವುದಿಲ್ಲ. ಈ ಬಗ್ಗೆ ಶೀಘ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಇಲ್ಲಿನ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಟ್ಟು ಎರಡು ಆಸ್ಪತ್ರೆಗಳನ್ನು ವಿಲೀನ ಮಾಡದಂತೆ ಮನವಿ ಮಾಡಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.