ಪಾವಗಡ: ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯದಿಂದ ವಶಪಡಿ ಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ಉಪ್ಪಾರಹಳ್ಳಿ ಗ್ರಾಮದ ರೈತರು ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.
ವಂಶಪಾರಂಪರ್ಯವಾಗಿ ಗ್ರಾಮದ ಸರ್ವೆ ನಂ 43, 26ರಲ್ಲಿ ಸುಮಾರು 60 ರೈತರು ವ್ಯವಸಾಯ ಮಾಡುತ್ತಿ ದ್ದಾರೆ. ದಶಕಗಳಿಂದ ಕಂದಾಯ ಪಾವತಿಸಿ ಜಮೀನನ್ನು ತಮ್ಮ ಅನುಭವ ದಲ್ಲಿಟ್ಟುಕೊಂಡಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡದೆ ಗುರುವಾರ ಜೆಸಿಬಿ, ಹಿಟಾಚಿ ಬಳಸಿ ಬಗರ್ ಹುಕುಂ ಸಾಗುವಳಿ ಭೂಮಿಯ ಸುತ್ತಲು ಗುಂಡಿ ನಿರ್ಮಿಸುತ್ತಿರುವುದು ಖಂಡನೀಯ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ಆರೋಪಿಸಿದರು.
ಪರಿಶಿಷ್ಟ ಜಾತಿಗೆ ಸೇರಿದ ಸುಮಾರು 60 ರೈತರಿಗೆ ಜಮೀನು ಜೀವನಕ್ಕೆ ಆಧಾರ. ಅಧಿಕಾರಿಗಳು ಏಕಾಏಕಿ ಜಮೀನು ವಶಪಡಿಸಿ ಕೊಳ್ಳುತ್ತಿರುವುದರಿಂದ ರೈತರು ಬೀದಿಗೆ ಬರುವಂತಾಗಿದೆ. ಸಾಗುವಳಿ ಚೀಟಿಯನ್ನು ನೀಡದಿರುವುದೇ ಇಂತಹ ಸಮಸ್ಯೆ ತಲೆದೋರಲು ಕಾರಣ ಎಂದು ಪ್ರತಿಭಟನನಿರತರು ದೂರಿದರು.
ಬಗರ್ ಹುಕುಂ ಸಾಗುವಳಿ ಭೂಮಿಯನ್ನು ರೈತರ ಹೆಸರಿಗೆ ಮಂಜೂರು ಮಾಡಿ, ಕೂಡಲೇ ಸಾಗುವಳಿ ಚೀಟಿ ವಿತರಿಸಬೇಕು. ರೈತರು, ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಅವರಿಗೆ ಮನವಿ ಸಲ್ಲಿಸಿದರು.