ವೈ.ಎನ್.ಹೊಸಕೋಟೆ: ಹೋಬಳಿಯಲ್ಲಿ ಬುಧವಾರ ಮುಂಜಾನೆ ಸುರಿದ ಕೃತ್ತಿಕಾ ಮಳೆ ಹಳ್ಳಕೊಳ್ಳಗಳಲ್ಲಿ ನೀರು ಹರಿಯುವಂತೆ ಮಾಡಿ, ರೈತರಲ್ಲಿ ಹರ್ಷ ಮೂಡಿಸಿದೆ.
ಮುಂಜಾನೆ 3 ಗಂಟೆಗೆ ಪ್ರಾರಂಭವಾದ ಮಳೆ 6 ಗಂಟೆಯವರೆಗೆ ಸುರಿದಿದೆ. ಚಿಕ್ಕಹಳ್ಳಿ, ಪೋತಗಾನಹಳ್ಳಿ, ನೀಲಮ್ಮನಹಳ್ಳಿ, ಸಿದ್ದಾಪುರ, ಮರಿದಾಸನಹಳ್ಳಿ, ಜೋಡಿಅಚ್ಚಮ್ಮನಹಳ್ಳಿ, ರಂಗಸಮುದ್ರ, ಸಾಸಲಕುಂಟೆ, ಬೂದಿಬೆಟ್ಟ, ಪೊನ್ನಸಮುದ್ರ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.
ಹೋಬಳಿ ಕೇಂದ್ರ ಸೇರಿದಂತೆ ಮಾರಮ್ಮನಹಳ್ಳಿ, ಬಲ್ಲೇನಹಳ್ಳಿ, ಜೋಡಿ ಅಚ್ಚಮ್ಮನಹಳ್ಳಿ, ತಿಪ್ಪಗಾನಹಳ್ಳಿ, ಯಲ್ಲಪ್ಪನಾಯಕನ ಹಳ್ಳಿಗಳಲ್ಲಿ ದಾಖಲೆಯ ಮಳೆಯಾಗಿದ್ದು, 99 ಮಿ.ಮೀ. ದಾಖಲಾಗಿದೆ.
ಸಣ್ಣಪುಟ್ಟ ಚೆಕ್ಡ್ಯಾಮ್, ಕುಂಟೆಗಳು ತುಂಬಿದೆ. ಕೆಲವು ಕಟ್ಟೆಗಳು ಹರಿದಿವೆ. ಇದೇ ರೀತಿ ನೀರಿನ ಸಂಗ್ರಹವಾದರೆ ಮುಂದಿನ ದಿನಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ರೈತರಿಗೆ ಅನುಕೂಲವಾಗುತ್ತದೆ ಎಂದು ಹಲವು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.