ತುಮಕೂರು: ‘ಉತ್ತಮ ಪುಸ್ತಕಗಳನ್ನು ಆಯ್ಕೆ ಮಾಡಿ ಓದುವವರು ನಮ್ಮ ನಡುವೆ ಇದ್ದು, ಅವರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಘಟಕ ಹಾಗೂ ದಿ.ಮೀನಾಕುಮಾರಿ ಬಸವಲಿಂಗಪ್ಪ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಥಾಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ವಿದ್ಯಾರ್ಥಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ರೊಟೇರಿಯನ್ ಕೆ.ಜಿ.ಬಸವಲಿಂಗಪ್ಪ ತಮ್ಮ ಪತ್ನಿ ಹೆಸರಿನಲ್ಲಿ ದಿ.ಮೀನಾಕುಮಾರಿ ಪ್ರತಿಷ್ಠಾನವನ್ನು ಪ್ರಾರಂಭಿಸಿ ಕಥಾಸ್ಪರ್ಧೆ ನಡೆಸಿ ಬಹುಮಾನಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
ಕಥಾಸ್ಪರ್ಧೆಯ ತೀರ್ಪುಗಾರರು ಹಾಗೂ ಸಾಹಿತಿ ಎನ್.ನಾಗಪ್ಪ, ‘ಕವಿಗಳು ಒಳ್ಳೆಯ ಮತ್ತು ಸಮಕಾಲೀನ ವಸ್ತುಗಳನ್ನು ಇಟ್ಟುಕೊಂಡು ಬರೆಯಬೇಕು. ಆದಕ್ಕೂ ಮೊದಲು ಕವಿಗಳಿಗೆ ಅನುಭವ ಮುಖ್ಯ. ಬದುಕಿನ ಅನುಭವದ ಜೊತೆಗೆ ಬರೆಯುತ್ತಾ ಹೋಗಬೇಕು’ ಎಂದು ಹೇಳಿದರು.
ಕವಿಗಳಿಗೆ ಸಾಮಾಜಿಕ ಬದ್ಧತೆ ಇರಬೇಕು. ವಾಸ್ತವಿಕ ನೆಲೆಯಲ್ಲಿ ಜೀವಂತ ಸಮಸ್ಯೆಗಳ ಬಗ್ಗೆ ಕವಿ ಕವನಗಳನ್ನು ಬರೆಯಬೇಕು. ಕವನದ ಮೂಲಕ ಮನಸ್ಸು ಕಟ್ಟುವ ಕೆಲಸವನ್ನು ಮಾಡಬಹುದು. ಕವನದೊಳಗೆ ಕಡಿಮೆ ಮಾತನಾಡಿದರೆ ಅಲ್ಲಿ ಕಾವ್ಯಾತ್ಮಕವಾದ ಸಾಲುಗಳನ್ನು ಕಂಡುಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.
ಕವಿಗೋಷ್ಠಿಯಲ್ಲಿ ಮಮತಾ, ಫಣೀಂದ್ರ, ಶಿಲ್ಪಶ್ರೀ, ರವಿತೇಜ, ಮಾಲಿಂಗರಾಯ, ಜಿತೇಂದ್ರ, ಫರ್ಮಾನ್, ದೇವರಾಜು, ಕಾವ್ಯಶ್ರೀ ಮತ್ತು ವರಲಕ್ಷ್ಮಿ ಕವನ ವಾಚನ ಮಾಡಿದರು.