ಪಟ್ಟನಾಯಕನಹಳ್ಳಿ: ಇಲ್ಲಿನ ರಸ್ತೆ ವಿಸ್ತರಣೆ ಜೊತೆಗೆ ರಸ್ತೆಯ ಎರಡು ಬದಿ ಚರಂಡಿ ನಿರ್ಮಾಣವನ್ನು ಕೈಗೆತ್ತಿಕೊಂಡ ಗುತ್ತಿಗೆದಾರ ಅರೆ ಬರೆ ಕಾಮಗಾರಿ ನಡೆಸಿರುವುದರಿಂದ ದೂಳುಯುಕ್ತ ಗಾಳಿ ಬರುತ್ತಿದೆ. ಇದರಿಂದ ಜನ ಹಿಡಿಶಾಪ ಹಾಕುತ್ತಿದ್ದಾರೆ.
ಕಳೆದ ವರ್ಷದ ನವೆಂಬರ್ನಲ್ಲಿ ರಸ್ತೆ ವಿಸ್ತರಣೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಶುರು ಮಾಡಿಲಾಯಿತು. ಪ್ರಾರಂಭದಲ್ಲಿ ವೇಗವಾಗಿ ಕೆಲಸ ಮಾಡಿ ನಂತರ ಕೆಲಸ ನಿಲ್ಲಿಸಿದ ಪರಿಣಾಮ ದೂಳಿ ಹೆಚ್ಚಾಯಿತು. ಇದರಿಂದ ರಸ್ತೆ ಬದಿ ವ್ಯಾಪಾರ ವಹಿವಾಟು ನಡೆಸದ ಸ್ಥಿತಿ ಉಂಟಾಗಿದೆ.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗೆ ಈ ಬಗ್ಗೆ ಪ್ರಶ್ನಿಸಿದರೆ, ‘ಪಟ್ಟನಾಯಕನಹಳ್ಳಿ ಕ್ರಾಸಿಂಗ್ವರೆಗೂ ರಸ್ತೆ ವಿಸ್ತರಣೆಗೆ ಕಾಮಗಾರಿ ಮಂಜೂರಾತಿಗೆ ಕಳುಹಿಸಿದ್ದು, ತಾಂತ್ರಿಕ ಸಮಿತಿ ಅನುಮೋದನೆ ಕೊಟ್ಟಿಲ್ಲ ಹಾಗಾಗಿ, ವಿಳಂಬವಾಗಿದೆ’ ಎನ್ನುತ್ತಾರೆ .
‘ಮಂಜೂರಾಗಿರುವ ಕಾಮಗಾರಿ ಮುಗಿಸದೆ ಮಂಜೂರಾಗಬೇಕಿರುವ ಕಾಮಗಾರಿಗೆ ಕಾಯುವ ಅವಶ್ಯಕತೆ ಏನಿದೆ. ಇದರಿಂದ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಕೊಟ್ಟಂತೆ. ಜನರ ಹಿತದೃಷ್ಟಿಯಿಂದ ಕಾಮಗಾರಿ ಜರೂರಾಗಿ ಮುಗಿಸಬೇಕಿದೆ’ ಎಂದು ಪಟ್ಟನಾಯಕನಹಳ್ಳಿ ವ್ಯಾಪಾರಿ ಪಿ.ಎಲ್.ರಂಗನಾಥ್ ಆಗ್ರಹಿಸುತ್ತಾರೆ.