ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಸಾಸಲು ಕೆರೆಗೆ ಹೇಮಾವತಿ ನೀರು ಹರಿದು ಬಂದಿದ್ದರಿಂದ ಶಾಸಕ ಸಿ.ಬಿ. ಸುರೇಶ್ಬಾಬು, ರೈತರು, ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸೋಮವಾರ ಗಂಗಾ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಹೇಮಾವತಿ ನೀರು ನಾಲೆ ಮೂಲಕ ಸಾಸಲು ಕೆರೆಯಿಂದ ಶೆಟ್ಟಿಕೆರೆ ಮೂಲಕ ತಿಮ್ಲಾಪುರ, ಬೋರನಕಣಿವೆ ಜಲಾಶಯಕ್ಕೆ ಹರಿಯಲಿದ್ದು, ರೈತರಿಗೆ ಅನುಕೂಲವಾಗುತ್ತದೆ ಎಂದರು.
ಸದ್ಯದಲ್ಲೇ ಕಂದಿಕೆರೆ ಭಾಗದಲ್ಲಿ ಹೇಮಾವತಿ ನಾಲಾ ಕಾಮಗಾರಿ ಪ್ರಾರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಉಳಿದ ಕೆರೆಗಳಿಗೂ ನೀರು ಹರಿಸಲಾಗುವುದು. ತಾಲ್ಲೂಕಿನ ರೈತ ಸಂಘದ ಕಾರ್ಯಕರ್ತರು, ಮಠಾಧೀಶರು ಹಾಗೂ ಜನಪ್ರತಿನಿಧಿಗಳ ಹೋರಾಟದ ಫಲವಾಗಿ ಹೇಮಾವತಿ ನೀರು ತಾಲ್ಲೂಕಿಗೆ ಹರಿದಿದೆ ಎಂದರು.